ಕನ್ನಡಿಗರ ಕೋಪದ ಬೆನ್ನಲ್ಲೆ ತುಳು ಸಿನಿಮಾಕ್ಕೆ ಹಾಡಿದ ಮಂಗ್ಲಿ
ಇತ್ತಿಚೆಗಷ್ಟೆ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅತಿಥಿಯಾಗಿ ಆಗಮಿಸಿದ್ದ ಗಾಯಕಿ ಮಂಗ್ಲಿ. ವೇದಿಕೆ ಮೇಲೆ ಕನ್ನಡವನ್ನು ನಿರ್ಲಕ್ಷಿಸಿದ ಬಗ್ಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೆ ಗಾಯಕಿ ಮಂಗ್ಲಿ ತುಳು ಹಾಡೊಂದನ್ನು ಹಾಡಿದ್ದಾರೆ.
'ರಾಬರ್ಟ್' ಸಿನಿಮಾದ ತೆಲುಗು ಆವೃತ್ತಿಯಲ್ಲಿ 'ಕಣ್ಣೇ ಅದಿರಿಂದಿ' ಎಂದು ಕನ್ನಡಿಗರ ಹೃದಯಕ್ಕೆ ಬಾಣ ಬಿಟ್ಟಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ, ಈಗ ಕನ್ನಡದ ಗಾಯಕಿಯೇ ಆಗಿ ಬಿಟ್ಟಿದ್ದಾರೆ. ಅವರ ಹಾಡು ಕೇಳಿದ್ರೆ ಸಾಕು ಇದು ಮಂಗ್ಲಿ ಹಾಡಿರೋ ಹಾಡ ಅಂತ ಗುರುತಿಸ್ತಾರೆ ಕನ್ನಡಿಗರು. ಇದೀಗ ಮಂಗ್ಲಿ ಇದೇ ಮೊದಲ ಬಾರಿ ತುಳು ಸಿನಿಮಾವೊಂದರ ಹಾಡಿಗೆ ಧ್ವನಿಯಾಗಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತನ್ನದೇ ವಿಭಿನ್ನ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯಗೆದ್ದ ಗಾಯಕಿ, ಇದೇ ಮೊದಲ ಬಾರಿ ತುಳು ಜನತೆಯ ಮನಗೆಲ್ಲಲು ಸಜ್ಜಾಗಿದ್ದಾರೆ.
ಎ.ಆರ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ಅರುಣ್ ರೈ ತೋಡಾರ್ ನಿರ್ಮಾಣ, ಎಸ್.ವಿ.ಬಾಬು ರಾಜೇಂದ್ರ ಸಿಂಗ್ ನಿರ್ದೇಶನದ ಬಿರ್ದ್ದ ಕಂಬಳ ಮತ್ತು ಕನ್ನಡದ ವೀರ ಕಂಬಳ ಸಿನಿಮಾಕ್ಕೆ ಹಾಡಿದ್ದಾರೆ. ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಾಡು ಹಾಡಿರುವುದು ವಿಶೇಷ. ತುಳುವಿನ ಕೆ.ಕೆ.ಪೇಜಾವರ, ಕನ್ನಡದ ರಘು ಶಾಸ್ತ್ರಿ ಅವರ ಸಾಹಿತ್ಯಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.

'ಏಕ್ ಲವ್ ಯಾ' ಸಿನಿಮಾದಲ್ಲಿ ಗಾಯನ
ಕನ್ನಡದಲ್ಲಿ ರಾಬರ್ಟ್ ಸಿನಿಮಾದ ಕಣ್ಣೆ ಅದರಂದಿ ಹಾಡಿನ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಮಾಡಿದ ಮಂಗ್ಲಿ, ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಗೀತೆಗೂ ದನಿಯಾದರು. ನಂತರ ಪುಷ್ಪಾ ಸಿನಿಮಾದ ಕನ್ನಡದ ಡಬ್ಬಿಂಗ್ ಸಿನಿಮಾದಲ್ಲಿ ಐಟಂ ಸಾಂಗ್ಗೂ ಮಂಗ್ಲಿ ಹಾಡಿದ್ದರು. ಅಷ್ಟೂ ಹಾಡುಗಳು ಸೂಪರ್ಹಿಟ್ ಆಗಿರುವುದೇ ವಿಶೇಷ. ಅಂದಹಾಗೆ ಕನ್ನಡದ ಹೊಸ ಸಿನಿಮಾದಲ್ಲಿ ಮಂಗ್ಲಿ ನಾಯಕಿಯಾಗಿಯೂ ನಟಿಸುತ್ತಿದ್ದಾರೆ.

ಕಂಬಳ ಕ್ರೀಡೆ ಕುರಿತಾದ ಸಿನಿಮಾ
ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಮತ್ತು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿರದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ನಡೆದಿದೆ.

ಹಲವು ಪ್ರಮುಖರು ನಟಿಸಿರುವ ಸಿನಿಮಾ
ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾದ ಶ್ರೀನಿವಾಸ ಗೌಡ ಹಾಗೂ ಕಾಂತಾರ ಚಿತ್ರದ ಗುರುವಖ್ಯಾತಿಯ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟ ಆದಿತ್ಯ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.ನವೀನ್ ಡಿ ಪಡಿಲ್ ಬೋಜರಾಜ ವಾಮಂಜೂರು ಉಷಾ ಭಂಡಾರಿ, ರಾಧಿಕಾ ನಾರಾಯಣ, ಗೋಪಿನಾಥ್ ಭಟ್, ಚಿತ್ರಕಥೆ- ಸಂಭಾಷಣೆ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಸಂಕಲನ ಶ್ರೀನಿವಾಸ್ ಬಾಬು, ಛಾಯಾಗ್ರಹಣ ಆರ್ ಗಿರಿ, ಸಾಹಸ ಡಿಫರೆಂಟ್ ಡ್ಯಾನಿ, ಮಾಸ್ ಮಾದ. ರಾಜೇಶ್ ಕುಡ್ಲ ಕಾರ್ಯಾಕಾರಿ ನಿರ್ಮಾಪಕರು, ನೃತ್ಯ ಮದನ್ ಹರಿಣಿ, ಕಲೆ ಚಂದ್ರಶೇಖರ್ ಸುವರ್ಣ. ಈಗಾಗಲೇ ಚಿತ್ರೀಕರಣ ಕೊನೇ ಹಂತದಲ್ಲಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











