ಶ್ರೇಷ್ಟ ಗಾಯಕನ ಕೊನೆ 'ಜೀವಗಾನ' : ಎಲ್ ಎನ್ ಶಾಸ್ತ್ರಿ ಬದ್ಧತೆಗೆ ದೊಡ್ಡ ಶರಣು
ಕನ್ನಡದ ಶ್ರೇಷ್ಟ ಗಾಯಕ ಎಲ್ ಎನ್ ಶಾಸ್ತ್ರಿ ಹಾಡಿರುವ ಕೊನೆಯ ಹಾಡು ಬಿಡುಗಡೆಯಾಗಿದೆ. ಹಾಡಿನ ರೆಕಾರ್ಡಿಂಗ್ ಮಾಡಿರುವ ಮೇಕಿಂಗ್ ವಿಡಿಯೋ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತದೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ 2017 ಆಗಸ್ಟ್ 30 ರಂದು ನಿಧನ ಹೊಂದಿದರು. ಅವರು ವಿಧಿವಶರಾಗುವ ಕೇವಲ ಒಂದು ತಿಂಗಳ ಮೊದಲು 'ಮೇಲೊಬ್ಬ ಮಾಯಾವಿ' ಚಿತ್ರದ ಒಂದು ಹಾಡನ್ನು ಹಾಡಿದ್ದರು.
Recommended Video
ಜೀವ ಹೋಗುವ ಮುನ್ನ ತಮ್ಮ ಧ್ವನಿಯ ಮೂಲಕ ''ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ.. ನುಡಿಸಲು ಹೊರಟ ಲೋಕವೆಂಬ ಜೀವ ಜಾಲ..'' ಹಾಡಿಗೆ ಜೀವ ತುಂಬಿದರು. ಈ ಹಾಡಿನ ಜೊತೆಗೆ ಚಿತ್ರಕ್ಕೆ ಸಂಗೀತವನ್ನು ಕೂಡ ಅವರೇ ನೀಡಿದ್ದಾರೆ.
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಂತಹ ಸಮಯದಲ್ಲಿಯೂ ಚಿತ್ರದ ಕೆಲಸದಲ್ಲಿ ಭಾಗಿಯಾಗಿದ್ದರು. ಹಾಡಿನ ಮೇಕಿಂಗ್ ವಿಡಿಯೋದಲ್ಲಿ ಅವರ ವೃತ್ತಿಪರತೆ ನೋಡಿದಾಗ ಹ್ಯಾಟ್ ಆಫ್ ಹೇಳಬೇಕು ಅನಿಸುತ್ತದೆ.

'ಮೇಲೊಬ್ಬ ಮಾಯಾವಿ' ಸಿನಿಮಾದ ಬಗ್ಗೆ ಎಲ್ ಎನ್ ಶಾಸ್ತ್ರಿ ಅವರಿಗೆ ಹೆಚ್ಚು ಒಲವು ಇತ್ತು. ಆದರೆ, ಚಿತ್ರಕ್ಕೆ ಸಂಗೀತ ನೀಡಿದ ಅವರು, ಹಿನ್ನಲೆ ಸಂಗೀತ ನೀಡುವ ಮೊದಲೇ ಇಹಲೋಕ ತ್ಯಜಿಸಿದರು. ನಂತರ ಆ ಕೆಲಸವನ್ನು ಮಣಿಕಾಂತ್ ಕದ್ರಿ ಪೂರ್ಣ ಮಾಡಿದರು.
''ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ.. ನುಡಿಸಲು ಹೊರಟ ಲೋಕವೆಂಬ ಜೀವ ಜಾಲ..'' ಹಾಡನ್ನು ಚಂದ್ರಚೂಡ್ ಚಕ್ರವರ್ತಿ ಬರೆದಿದ್ದಾರೆ. ಬಿ ನವೀನ್ ಕೃಷ್ಣ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.
ಸಂಚಾರಿ ವಿಜಯ್, ಅನನ್ಯ ಶಾಸ್ತ್ರಿ, ಚಂದ್ರಚೂಡ್ ಚಕ್ರವರ್ತಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಂಚಾರಿ ವಿಜಯ್ ಡಿಫರೆಂಟ್ ಲುಕ್ ಗಳು ಅವರ ಪಾತ್ರದ ಮೇಲೆ ನಿರೀಕ್ಷೆ ಹುಟ್ಟುಹಾಕಿವೆ.
ಈ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











