ಗಣೇಶ ಹಬ್ಬಕ್ಕೆ ಬೆಂಗಳೂರಿನಲ್ಲಿ ಇಳಯರಾಜ ರಸಸಂಜೆ

ಸಂಗೀತ ಕಲಾಭಿಜ್ಞ ಇಳಯರಾಜ ಅವರು ಒಟ್ಟು 100 ಮಂದಿಯ ತಂಡದೊಂದಿಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರ ವೃತ್ತಿಜೀವದಲ್ಲೇ ಇದು ಅತ್ಯಂತ ದೊಡ್ಡ ಶೋ. ಇದರ ಜೊತೆ ಶಾಸ್ತ್ರೀಯ, ಹಿಂದೂಸ್ತಾನಿ, ಸುಗಮ ಸಂಗೀತ, ಭಕ್ತಿ ಸಂಗೀತ, ಪಾಶ್ಚಿಮಾತ್ಯ ಹಾಗೂ ಮೆಲೋಡಿ ಮುಂತಾದ ರಸಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಇಳಯರಾಜ ಅವರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ವಿ ಹರಿಕೃಷ್ಣ, ಸೋನು ನಿಗಮ್, ಶಿವಮಣಿ, ಶಂಕರ್ ಮಹದೇವನ್, ದೇವಿಶ್ರೀ ಪ್ರಸಾದ್ ಮುಂತಾದವರು ಕೈಜೋಡಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ 500ಕ್ಕೂ ಹೆಚ್ಚು ನೃತ್ಯ ಕಲಾವಿದರು ಡಾನ್ಸ್ ಮಾಡಲಿದ್ದಾರೆ.
ಭರತ ನಾಟ್ಯ, ಕಥಕ್, ಒಡಿಸ್ಸಿ, ಯಕ್ಷಗಾನ, ಮೋಹಿನಿ ಆಟ್ಟಂ ಹಾಗೂ ಕೂಚಿಪೂಡಿ ಶೈಲಿಯ ನೃತ್ಯಪ್ರಕಾರಗಳಲ್ಲಿ ಕಲಾವಿದರು ನರ್ತಿಸಲಿದ್ದಾರೆ. ಈ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಡಿವಿಜಿ ರಸ್ತೆಗೆ ಬರಬೇಕು. ಅಂದು ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಇದಾದ ಬಳಿಕ ಇಳಯರಾಜ ಸಂಗೀತ ಸಂಜೆ ಇರುತ್ತದೆ.
ಇದೇ ಸಂದರ್ಭದಲ್ಲಿ 101 ಮಂದಿ ಬಾಣಸಿಗರು ಸಿದ್ಧಪಡಿಸಿದ 6,000 ಕೆಜಿಯ ಲಡ್ಡು ತಯಾರಿಸಲಿದ್ದಾರೆ. ಈ ಭಾರಿ ಗಾತ್ರದ ಲಡ್ಡು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಈ ಲಡ್ಡುವನ್ನು ಬಳಿಕ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.
ಹನ್ನೊಂದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಕರ್ನಾಟಕದ ವೈವಿಧ್ಯಭರಿತ ತಿಂಡಿ ತಿನಿಸುಗಳು. ಆರು ಜಿಲ್ಲೆಗಳ 125 ವಿವಿಧ ಭಕ್ಷ್ಯಗಳನ್ನು ನಾಲಿಗೆ ಚಪ್ಪರಿಸುತ್ತಾ ಸವಿಯಬಹುದು. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ಕಾರ್ಯಕ್ರಮಗಳು ಕಣ್ಮನ ಸೂರೆಗೊಳಿಸಲಿವೆ. ತಪ್ಪದೆ ಬನ್ನಿ. (ಒನ್ಇಂಡಿಯಾ ಕನ್ನಡ)


Click it and Unblock the Notifications











