'ಹೊಂದಿಸಿ ಬರೆಯಿರಿ' ಹಾಡು ರಿಲೀಸ್ ಮಾಡಿ, ಬಿಡುಗಡೆ ಮುಂದೂಡಿದ ಟೀಮ್!
'ಹೊಂದಿಸಿ ಬರೆಯಿರಿ' ಕನ್ನಡ ಚಿತ್ರರಂಗದ ಮತ್ತೊಂದು ವಿಶಿಷ್ಟ ಸಿನಿಮಾ. ಇದೂವರೆಗೂ ಸಿನಿಮಾ ತೋರಿಸಿದ ಸ್ಯಾಂಪಲ್ಗಳು ಹೊಸ ಫೀಲಿಂಗ್ ನೀಡಿವೆ. ಒಂದೊಂದು ಹಾಡುಗಳೂ ಸಂಗೀತ ಪ್ರಿಯರನ್ನು ರಂಜಿಸಿವೆ.
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಈ ಬಹು ತಾರಾಗಣದ ಸಿನಿಮಾ 'ಹೊಂದಿಸಿ ಬರೆಯಿರಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರತಂಡ ಹಾಡುಗಳ ಮೆರವಣಿಗೆ ಆರಂಭಿಸಿದ್ದು, ಈಗಾಗಲೇ ಎರಡು ಹಾಡುಗಳು ಸಿನಿಪ್ರಿಯರಲ್ಲಿ ಮೆಚ್ಚುಗೆ ಗಳಿಸಿತ್ತು. ಇದೀಗ ಮೂರನೇ ಹಾಡು ಕೂಡ ಬಿಡುಗಡೆಯಾಗಿದೆ.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರೇ ಬರೆದಿರೋ "ತಲೆಹರಟೆ ಮಾಡುತ್ತಿದೆ ಈ ಹೃದಯ..." ಎಂಬ ಪೆಪ್ಪಿ ಸಾಂಗ್ ಕಿಕ್ ಕೊಡೋಕೆ ಶುರು ಮಾಡಿದೆ. ವರುಣ್ ರಾಮಚಂದ್ರ ಹಾಗೂ ಐಶ್ವರ್ಯಾ ರಂಗರಾಜನ್ ಈ ಹಾಡಿಗೆ ದನಿ ನೀಡಿದ್ದಾರೆ. ಜೋ ಕೋಸ್ಟ ಟ್ಯೂನ್ ಫ್ರೆಶ್ ಅಂತ ಅನಿಸುತ್ತಿದೆ.

ಈಗಾಗಲೇ ರಿಲೀಸ್ ಆಗಿರೋ 'ಬೆಳಕಲಿ' ಹಾಗೂ 'ಓ ಕವನ' ಎಂಬ ಎರಡು ಹಾಡುಗಳು ಕೇಳುಗರ ಕಿವಿಗೆ ಇಂಪು ನೀಡಿದೆ. ಅಂದ್ಹಾಗೆ ಈ ಸಿನಿಮಾ ಇದೇ ನವೆಂಬರ್ 18ರಂದು ರಿಲೀಸ್ ಆಗಬೇಕಿತ್ತು. ಆದರೆ, ದಿಢೀರನೇ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ.
'ಹೊಂದಿಸಿ ಬರೆಯಿರಿ' ಸಿನಿಮಾದ ಅಂತಿಮ ಹಂತದ ತಾಂತ್ರಿಕ ಕೆಲಸಗಳು ಇನ್ನೂ ಬಾಕಿ ಉಳಿದಿವೆ. ನವೆಂಬರ್ 18ರ ಬದಲಾಗಿ ಹೊಸದಾದ ರಿಲೀಸ್ ಡೇಟ್ ಅನ್ನು ಸಿನಿಮಾ ತಂಡ ಅನೌನ್ಸ್ ಮಾಡೋಕೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ನಿರ್ಧರಿಸಿದ್ದಾರೆ.
ಅಂದ್ಹಾಗೆ 'ಹೊಂದಿಸಿ ಬರೆಯಿರಿ' ಸಿನಿಮಾ ಕಥೆಯೇ ವಿಭಿನ್ನವಾಗಿದೆ. ಇಡೀ ಸಿನಿಮಾ ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಹೇಗೆ ಬದುಕು ಸಾಗುತ್ತೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸುವುದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಚೊಚ್ಚಲ ಸಿನಿಮಾ. ಐದು ಜನ ಸ್ನೇಹಿತರ ಬದುಕಿನ ಒಂದೊಂದು ಚಿತ್ರಣ ಹಾಗೂ ಭಾವನಾತ್ಮಕ ಜರ್ನಿ ಈ ಸಿನಿಮಾದಲ್ಲಿದೆ.

ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.


Click it and Unblock the Notifications











