ಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ
ಕಿರುತೆರೆಯ ಬ್ರಹ್ಮ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದರಾದ ಟಿ.ಎನ್ ಸೀತಾರಾಮ್ ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಕಳೆದ ಕೆಲವು ತಿಂಗಳುಗಳ ಹಿಂದಷ್ಟೆ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಸದ್ದೇ ಇಲ್ಲದೇ ಹಿರಿತೆರೆಯತ್ತ ಮುಖ ಮಾಡಿದ್ದ ಟಿ.ಎನ್ ಸೀತಾರಾಮ್ ಅವರು 'ಕಾಫಿ ತೋಟ' ಚಿತ್ರ ನಿರ್ದೇಶನದಲ್ಲಿ ತೊಡಗಿಕೊಂಡಿದ್ದರು.
'ಮತದಾನ', 'ಮೀರಾ ಮಾಧವ ರಾಘವ' ಚಿತ್ರಗಳ ನಂತರ ಮತ್ತೊಂದು ಸಸ್ಪೆನ್ಸ್ ಕಥೆಗೆ ಆಕ್ಷನ್ ಕಟ್ ಹೇಳಿರುವ ಟಿ.ಎನ್.ಸೀತಾರಾಮ್ ಅವರ 'ಕಾಫಿ ತೋಟ' ಚಿತ್ರದ ಧ್ವನಿ ಸುರುಳಿ ನಿನ್ನೆ(ಏಪ್ರಿಲ್ 10) ಬಿಡುಗಡೆ ಆಗಿದೆ.

'ಕಾಫಿ ತೋಟ' ಧ್ವನಿ ಸುರುಳಿ ಬಿಡುಗಡೆ ಮಾಡಿದ ಪವರ್ ಸ್ಟಾರ್
ಟಿ.ಎನ್.ಸೀತಾರಾಮ್ ನಿರ್ದೇಶನದ 'ಕಾಫಿ ತೋಟ' ಚಿತ್ರದ ಧ್ವನಿ ಸುರಳಿಯನ್ನು ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಆಡಿಯೋ ರಿಲೀಸ್ ಮಾಡಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅನೂಪ್ ಸೀಳಿನ್ ಸಂಗೀತ
ಟಿ.ಎನ್.ಎಸ್ ನಿರ್ದೇಶನದ 'ಕಾಫಿ ತೋಟ' ಚಿತ್ರಕ್ಕೆ ಜೆ.ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಡಿಯೋ ರಿಲೀಸ್ ನಂತರ ಅನೂಪ್ ಸೀಳಿನ್ ಚಿತ್ರದ 'ಹಾಡ್ ಹಾಡ್ಕಂಡಿರು.. ಓಡಾಡ್ಕಂಡಿರು.. ಮಾಡು ಇಲ್ಲ ಮಡಿ ಇದೆ ಲೈಫ್... ಕಾಡಾದ್ರು ಸರಿ.. ನಾಡಾದ್ರು ಸರಿ... ಒಂಟಿಯಾಗಿ ಇದ್ರೇ ನೀ ಸೇಫು' ಹಾಡನ್ನು ಹಾಡಿದರು.

'ಮನ್ವಂತರ ಚಿತ್ರ' ಸಂಸ್ಥೆ ಅಡಿಯಲ್ಲಿ ಚಿತ್ರ ನಿರ್ಮಾಣ
ಟಿಎನ್ಎಸ್ ಅವರೇ ಹುಟ್ಟುಹಾಕಿರುವ 'ಮನ್ವಂತರ ಚಿತ್ರ' ಚಿತ್ರ ಸಂಸ್ಥೆ ಅಡಿಯಲ್ಲಿ 'ಕಾಫಿ ತೋಟ' ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಸಾಹಿತ್ಯ ಇದೆ.

'ಕಾಫಿ ತೋಟ'ದಲ್ಲಿ ಯಾರೆಲ್ಲಾ ಇದ್ದಾರೆ?
'ಕಾಫಿ ತೋಟ'ದ ಮುಖ್ಯ ಭೂಮಿಕೆಯಲ್ಲಿ ಸಂಯುಕ್ತಾ ಹೊರನಾಡು, ರಾಧಿಕಾ ಚೇತನ್, ರಘು ಮುಖರ್ಜಿ, ಅಚ್ಯುತ್ ಕುಮಾರ್, ಅಪೇಕ್ಷ ಪುರೋಹಿತ್, ಉಡುಪಿಯ ಹುಡುಗ ರಾಹುಲ್ ಮಾಧವ್ ಅಭಿನಯಿಸಿದ್ದಾರೆ.

ತ್ರಿಕೋನ ಪ್ರೇಮಕಥೆ
ಟಿ.ಎನ್.ಎಸ್ ಅವರ 'ಕಾಫಿ ತೋಟ' ಚಿತ್ರದಲ್ಲಿ ಒಬ್ಬ ಲಾಯರ್, ಇನ್ನೊಬ್ಬ ಕಾಫಿ ತೋಟದ ಮಾಲೀಕ ಮತ್ತು ಅವನ ಮಗಳು ಪ್ರಮುಖ ಪಾತ್ರಗಳಾಗಿದ್ದು, ತ್ರಿಕೋನ ಪ್ರೇಮಕಥೆಯ ಅಂಶವನ್ನು ಒಳಗೊಂಡಿದ್ದು, ಜೊತೆಗೆ ಸಸ್ಪೆನ್ಸ್ ಕ್ಯಾರಿ ಮಾಡಲಾಗಿದೆ.

ಚಿತ್ರ ಬಿಡುಗಡೆ ಯಾವಾಗ?
ಟಿ.ಎನ್.ಸೀತಾರಾಮ್ ಅವರ ಮಗ ಸತ್ಯಜಿತ್ ಮತ್ತು ಚಂದನ್ ಶಂಕರ್ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಅಶೋಕ್ ಕಶ್ಯಪ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. 'ಕಾಫಿ ತೋಟ' ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.


Click it and Unblock the Notifications











