ಜೋಕೆ-ಜೋಕೆ ಮೇಕೆ: ಹಸಿವಿನ ಕತೆ ಹೇಳುತ್ತಿದೆ 'ಪುಷ್ಪ' ಹಾಡು
ಅಲ್ಲು ಅರ್ಜುನ್, ರಶ್ಮಿಕಾ ನಟಿಸಿ, ಸುಕುಮಾರ್ ನಿರ್ದೇಶಿಸಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ 'ಪುಷ್ಪ'ದ ಮೊದಲ ಹಾಡು ಇಂದು ಬಿಡುಗಡೆ ಆಗಿದೆ. ತೆಲುಗಿನಲ್ಲಿ 'ದಾಕ್ಕೊ ದಾಕ್ಕೊ ಮೇಕ' ಎಂದಿರುವ ಹಾಡನ್ನು ಕನ್ನಡದಲ್ಲಿ 'ಜೋಕೆ ಜೋಕೆ ಮೇಕೆ' ಎಂದು ವಿಜಯಪ್ರಕಾಶ್ ಹಾಡಿದ್ದಾರೆ.
'ಪುಷ್ಪ' ಸಿನಿಮಾದ ಹಾಡು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿ ಒಟ್ಟಿಗೆ ಬಿಡುಗಡೆ ಆಗಿದೆ.
ಅಬ್ಬರದ ಆದರೆ ಲಯಬದ್ಧವಾದ ಸಂಗೀತ ಹೊಂದಿರುವ ಈ ಹಾಡಿನ ಸಾಹಿತ್ಯ ಸಾಕಷ್ಟು ಗಮನ ಸೆಳೆಯುತ್ತಿದೆ.
'ಜೋಕೆ ಜೋಕೆ ಮೇಕೆ, ಹೆಬ್ಬುಲಿ ಹಾಕಿದೆ ಕೇಕೆ' ಎಂದು ಕನ್ನಡದಲ್ಲಿದ್ದರೆ, 'ದಾಕ್ಕೊ ದಾಕ್ಕೊ ಮೇಕ ಪುಲೊಚ್ಚಿ ಕೊರುಕುದ್ದಿ ಪೀಕ' (ಬಚ್ಚಿಕೊ ಬಚ್ಚಿಕೊ ಮೇಕೆ ಹುಲಿ ಬಂದು ಕೊರಳು ಸೀಳುತ್ತೆ) ಎಂದು ತೆಲುಗಿನಲ್ಲಿದೆ. ಆಡು-ಹುಲಿಯ ಕತೆಯ ಮೂಲಕ ಹಸಿವು, ಪರಾವಲಂಬನೆ, ಜೀವನ ಚಕ್ರ, ಬಡತನ ಹಲವು ಕತೆಗಳನ್ನು ಕೆಲವು ಸಾಲುಗಳಲ್ಲಿ ಹೇಳಲು ಮಾಡಿರುವ ಯತ್ನದಂತೆ ತೋರುತ್ತಿದೆ.
'ಬೆಳಕನ್ನು ಎಲೆ ತಿನ್ನುತ್ತೆ, ಎಲೆಯನ್ನು ಆಡು ತಿನ್ನುತ್ತೆ, ಆಡನ್ನು ಹುಲಿ, ಹುಲಿಯನ್ನು ಸಾವು ತಿಂದರೆ ಸಾವನ್ನೇ ತಿನ್ನುತ್ತದೆ ಕಾಲ. ಕಾಲವನ್ನು ಕಾಳಿ ತಿನ್ನುತ್ತಾಳೆ ಇದು ಹಸಿವಿನ ಜಾಲ' ಎಂದು ಹಸಿವಿನ ಚಕ್ರದ ಬಗೆಗೆ ಹೇಳುತ್ತಲೇ ಒಬ್ಬರಿಗಿಂತಲೂ ಒಬ್ಬರು ದೊಡ್ಡವರು ಎಂಬ ನೀತಿಯನ್ನೂ ಹೇಳುತ್ತಿದೆ ಹಾಡಿನ ಮೊದಲ ಸಾಲುಗಳು.

ಒಂದಕ್ಕೆ ಹಸಿವಾದರೆ ಮತ್ತೊಂದರ ಜೀವ ಹೋಗುತ್ತದೆ
'ಒಂದು ಭೇಟೆ ಆಡಿದರೆ ಇನ್ನೊಂದು ಭೇಟೆ. ಒಂದರ ಹಿಂದೆ ಒಂದು ಓಡುತ್ತಿದೆ. ಒಂದಕ್ಕೆ ಇನ್ನೊಂದು ದೊರಕಿದರೆ ಒಂದರ ಪ್ರಾಣ ಹೋಗುತ್ತದೆ (ಬೇಟೆಗಾರನಿಗೆ ಭೇಟೆ), ಸಿಗದೇ ಹೋದರೂ ಒಂದರ ಪ್ರಾಣ ಹೋಗುತ್ತದೆ (ಬೇಟೆಗಾರನ ಪ್ರಾಣ). ಒಂದು ಜೀವಿಗೆ ಹೊಟ್ಟೆ ಹಸಿದರೆ ಇನ್ನೊಂದು ಜೀವಿಯ ಪ್ರಾಣ ಹೋಗುತ್ತದೆ ಎನ್ನುತ್ತಿದೆ ಹಾಡಿನ ಎರಡನೇ ವಾಕ್ಯವೃಂದ. ಒಂದು ಜೀವಿ ಬದುಕಲು ಮತ್ತೊಂದು ಜೀವಿಯ ಕೊಲ್ಲದೆ ವಿಧಿಯಿಲ್ಲ ಎನ್ನುತ್ತಿದೆ ಈ ಸಾಲುಗಳು. ಆ ಮೂಲಕ ಸಿನಿಮಾದ ನಾಯಕನ ವ್ಯಕ್ತಿತ್ವವನ್ನು ಪರಿಚಯವೂ ಸಾಲುಗಳಲ್ಲಿ ಅಡಕವಾದಂತಿದೆ.

ಗಾಳವನ್ನೇ ನುಂಗುವೆಯಾದರೆ ಜೀವನ ನಿನ್ನದು
'ಮನುಷ್ಯನಿಗೆ ಬದುಕೆಂಬುದೇ ಗಾಳ, ಗಾಳವನ್ನೇ ನುಂಗುವ ಹಸಿವು ಇದ್ದರಷ್ಟೆ ನೀನು ಬದುಕಲು ಸಾಧ್ಯ, ಬಲವಿದ್ದನಿದಷ್ಟೆ ಇಲ್ಲಿ ರಾಜ್ಯ' ಎನ್ನುವ ಸಾಲುಗಳು ಎಲ್ಲೂ ತಗ್ಗದೆ ಧೈರ್ಯದಿಂದ ಎದುರಿಸಿದರಷ್ಟೆ ಇಲ್ಲಿ ಬದುಕಲು ಸಾಧ್ಯ. ನಿನ್ನಷ್ಟದಂತೆ ಬದುಕಲು ಹೋರಾಡಲೇ ಬೇಕು ಎಂದು ನಾಯಕನ ಕೈಲಿ ಹೇಳಿಸಿದ್ದಾರೆ ನಿರ್ದೇಶಕ ಸುಕುಮಾರ್, ನಿರ್ದೇಶಕರ ಆಲೋಚನೆಗಳಿಗೆ ಅಕ್ಷರ ರೂಪ ನೀಡಿದವರು ಚಂದ್ರಭೋಸ್, ಕನ್ನಡದ ಹಾಡನ್ನು ವರದರಾಜ್ ಚಿಕ್ಕಬಳ್ಳಾಪುರ ಬರೆದಿದ್ದಾರೆ.

'ಬಿದ್ದ ಗುದ್ದು ಕಲಿಸುವ ಪಾಠ ಬುದ್ಧನೂ ಕಲಿಸಲಾರ'
'ದೇವರಿಗಾದರೂ ಏಟೆ ಗುರುವು, ಬಿದ್ದ ಗುದ್ದುಗಳು ಕಲಿಸುವ ಪಾಠವನ್ನು ಬುದ್ಧನೂ ಹೇಳಲಾರ' ಎನ್ನುತ್ತಾ ಜೀವನದಲ್ಲಿ ಹೊಡೆತಗಳು ಕಲಿಸುವ ಪಾಠವನ್ನು ಯಾರೂ ಕಲಿಸಲಾರರು ಎಂಬ ಜೀವನ ಪಾಠವನ್ನು ಹೇಳುತ್ತಿದ್ದಾನೆ ನಾಯಕ, ತಾನು ಹೊಡೆತ ತಿಂದೇ ಇಂದು ಹೊಡೆಯಲು ಕಲಿತಿದ್ದೇನೆ, ನನ್ನ ಮಾತನ್ನು ಕೇಳುವಂತೆ ಮಾಡಿಕೊಂಡಿದ್ದೇನೆ ಎನ್ನುತ್ತಿದ್ದಾನೆ. ಆ ಮೂಲಕ ಹಸಿವು, ಬಡತನ, ಹೋರಾಟದ ಬಗ್ಗೆ ಹಾಡಿನ ಮೂಲಕ ಹೇಳಲಾಗುತ್ತಿದೆ.

ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆ
'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್, ಕನ್ನಡದ ಡಾಳಿ ಧನಂಜಯ್, ನಟ ಸುನಿಲ್, ಜಗಪತಿ ಬಾಬು ಅವರುಗಳು ವಿಲನ್ಗಳಾಗಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಖ್ಯಾತ ನಿರ್ದೇಶಕ ಸುಕುಮಾರ್. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗವು ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ.


Click it and Unblock the Notifications











