ಪುನೀತ್, ಕಿಚ್ಚ ಸುದೀಪ್ ನಂತರ ಈಗ ಉಪೇಂದ್ರ ಸರದಿ
ಕನ್ನಡ ಚಿತ್ರರಂಗದ ಪ್ರಮುಖ ನಾಯಕರು ಇತರ ನಾಯಕರ ಚಿತ್ರಗಳಿಗೆ ಧ್ವನಿಯಾಗುತ್ತಿರುವ ಉತ್ತಮ ಪರಂಪರೆ ಸದ್ಯ ಮುಂದುವರಿಯುತ್ತಿದೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಇದು ಹೀಗೇ ಮುಂದುವರಿಯುತ್ತಿರಲಿ.
ಶಶಾಂಕ್ ನಿರ್ದೇಶನದ ಅದ್ದೂರಿ ಕೃಷ್ಣ-ಲೀಲಾ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾಯಿತು. ನವೀನ್ ಕೃಷ್ಣ ಅಭಿನಯದ 'ಹಗ್ಗದ ಕೋಣೆ' ಚಿತ್ರಕ್ಕೆ ಸುದೀಪ್ ಧ್ವನಿಯಾಗಿದ್ದಾಯಿತು. ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಸರದಿ. (ಕೃಷ್ಣಲೀಲಾ ಹಾಡಿಗೆ ಪುನೀತ್ ಧ್ವನಿ)

'ಸ್ಯಾಂಡಲ್ ವುಡ್ ಕೃಷ್ಣ' ಅಜಯ್ ರಾವ್ ಚೊಚ್ಚಲ ನಿರ್ಮಾಣದ ಶ್ರೀಕೃಷ್ಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಬ್ಯಾನರಡಿಯಲಿ ಮೂಡಿ ಬರುತ್ತಿರುವ ಕೃಷ್ಣ-ಲೀಲಾ ಚಿತ್ರದ ಹಾಡೊಂದನ್ನು ಉಪೇಂದ್ರ ಹಾಡಿದ್ದಾರೆ.
'ಘೋನಮ್ಮುಂಗು ಸಿಮ್ಮಪ್ಪಂಗು ಹುಟ್ಟಿದ ಮಕ್ಳು ಇವ್ರೇನೇ ಕಾಮನ್ ಕೃಷ್ಣ ಲೀಲಾ' ಎಂದು ಆರಂಭವಾಗುವ ವಿಭಿನ್ನ ಸಾಹಿತ್ಯವಿರುವ ಹಾಡನ್ನು ಸೋಮವಾರ (ಅ 27) ಬಾಲಾಜಿ ಸ್ಟುಡಿಯೋದಲ್ಲಿ ಧ್ವನಿಮುದ್ರಿಸಿ ಕೊಳ್ಳಲಾಯಿತು. ಈ ಹಾಡಿಗೆ ಸಾಹಿತ್ಯ ಬರೆದವರು ನಿರ್ದೇಶಕ ಶಶಾಂಕ್.
ಹಾಡಿನ ಸಾಹಿತ್ಯ ಮತ್ತು ರಾಗ ಸಂಯೋಜನೆಗೆ ವಿಶೇಷ ಮೆಚ್ಚುಗೆ ವ್ಯಕ್ತ ಪಡಿಸಿದ ಉಪ್ಪಿ, ಚಿತ್ರತಂಡಕ್ಕೆ ಶುಭ ಕೋರುವುದನ್ನು ಮರೆಯಲಿಲ್ಲ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಚಿತ್ರದ ನಿರ್ದೇಶಕ ಶಶಾಂಕ್ 'ಫಿಲ್ಮೀಬೀಟ್' ಗೆ ತಿಳಿಸಿದ್ದಾರೆ.

ನವೆಂಬರ್ ಮೊದಲನೇ ಮತ್ತು ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ ಮತ್ತು ನವೆಂಬರ್ ಎರಡನೇ ವಾರದಲ್ಲಿ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಲಿದೆ ಎಂದು ಶಶಾಂಕ್ ಹೇಳಿದ್ದಾರೆ.
ವಿ ಶ್ರೀಧರ್ ಸಂಗೀತವಿರುವ ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ.
ಚಿತ್ರದ ಪ್ರಮುಖ ತಾರಾಗಣದಲ್ಲಿ ಅಜಯ್ ರಾವ್, ಮಯೂರಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಭರಾಜ್, ತಬ್ಲಾನಾಣಿ, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.


Click it and Unblock the Notifications











