ಹತ್ತು ಸಾವಿರ ಹಾಡುಗಳ ಸರದಾರ ವಾಲಿ ಇನ್ನಿಲ್ಲ

ತಮಿಳಿನ ಸ್ಟಾರ್ ಎಂಜಿಆರ್ ರಿಂದ ಧನುಷ್ ತನಕ, 50ರ ದಶಕದಿಂದ 2013ರ ತನಕ ಹತ್ತು ಸಾವಿರಕ್ಕೂ ಅಧಿಕ ಗೀತೆಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.
1931ರಲ್ಲಿ ತಿರುಚ್ಚಿಯ ತಿರುಪಾರೈಥುರೈನಲ್ಲಿ ಶ್ರೀನಿವಾಸ ಅಯ್ಯಂಗಾರ್ ಹಾಗು ಪೊನ್ನಂಮ್ಮಲ್ ದಂಪತಿಯ ಪುತ್ರನಾಗಿ ಎಸ್ ರಂಗರಾಜನ್ ಆಗಿ ಜನಿಸಿದರು. ನಂತರ 'ವಾಲಿ' ಎಂಬ ಅಂಕಿತ ನಾಮದಿಂದ ಜನಪ್ರಿಯತೆ ಗಳಿಸಿದರು.
ಚಿಕ್ಕಂದಿನಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಿರುಚ್ಚಿ, ಶ್ರೀರಂಗಂನಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದರು. ಆಲ್ ಇಂಡಿಯಾ ರೇಡಿಯಾದಲ್ಲಿ ಕೆಲ ಕಾಲ ಉದ್ಯೋಗಿಯಾಗಿದ್ದವರು ನಂತರ ಚಿತ್ರರಂಗಕ್ಕೆ ಕಾಲಿಟ್ಟು ಖ್ಯಾತಿ ಗಳಿಸಿದರು.
ವಾಲಿ ಅವರ ನಾಟಕ ಶಾಲೆಯಲ್ಲಿ ಕಲಿಯಲು ಬಂದಿದ್ದ ಇಬ್ಬರು ತರುಣರ ಪೈಕಿ ಒಬ್ಬರಿಗೆ ಹೆಣ್ಣಿನ ವೇಷ ಹಾಕುವಂತೆ ಒಮ್ಮೆ ಹೇಳಿದ್ದರು. ಆದರೆ, ಅದಕ್ಕೆ ಆತ ಒಪ್ಪದೆ ರಂಗಶಾಲೆ ತೊರೆದಿದ್ದರು. ಮುಂದೆ ಆತ ಕಂಚಿ ಶಂಕರ ಮಠದ ಶ್ರೀ ಜಯೇಂದ್ರ ಸರಸ್ವತಿಯಾಗಿ ಬೆಳೆದರು. ಮತ್ತೊಬ್ಬ ತರುಣ ಮುಂದೆ ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಆಗಿ ಪ್ರಸಿದ್ಧಿ ಹೊಂದಿದ.
ಮಾಸ್ಟರ್ ಕಾಮಿಡಿಯನ್, ಕನ್ನಡ ಮೂಲದ ತಾಯ್ ನಾಗೇಶ್ ಜೊತೆ ರೂಮ್ ಹಂಚಿಕೊಂಡು ಆರಂಭದ ದಿನಗಳಲ್ಲಿ ಕಷ್ಟಪಟ್ಟ ವಾಲಿ ಹಂತ ಹಂತವಾಗಿ ಸಾಹಿತ್ಯದ ಮೂಲಕ ಕಣ್ಣನ್ ದಾಸ್ ಸ್ಥಾನಕ್ಕೇರಿ ಕಾಲಿವುಡ್ ನಲ್ಲಿ ಬೆಳೆದರು.
ಮಾಜಿ ಮುಖ್ಯಮಂತ್ರಿ ಸಿ.ಎನ್ ಅಣ್ಣಾದೊರೈ ಡೈಲಾಗ್ಸ್ ಬರೆದಿದ್ದ ಎಂಜಿಆರ್ ಚಿತ್ರಕ್ಕೆ ಮೊದಲಿಗೆ ವಾಲಿ ಗೀತ ಸಾಹಿತ್ಯ ಒದಗಿಸಿದರು. ನಂತರ, ಜೆಮಿನಿ ಗಣೇಶನ್, ಎಂಜಿಆರ್ ಚಿತ್ರಕ್ಕೆ ಖಾಯಂ ಸಾಹಿತಿಯಾದರು.
ಸತ್ಯ, ಹೇರಾಮ್, ಪಾರ್ಥಾಲೆ ಪರವಶಂ ಸೇರಿದಂತೆ ಸಾವಿರಕ್ಕೂ ಅಧಿಕ ಚಿತ್ರಗಳಿಗೆ ಗೀತ ಸಾಹಿತ್ಯ ಒದಗಿಸಿದ್ದರು. ಇದಲ್ಲದೆ ಮುರುಗನ್ ಮೇಲೆ ರಚಿಸಿದ ಗೀತೆಗಳು ರಾಮ, ಕೃಷ್ಣ, ರಾಮಾನುಜ, ಪಾಂಡವರ ಭೂಮಿ(ಮಹಾಭಾರತ) ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ.
ಕವಿ ವಾಲಿ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. 5ಬಾರಿ ತಮಿಳುನಾಡಿನ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. 1973ರಲ್ಲಿ ಭಾರತ ವಿಲಾಸ್ ಚಿತ್ರಕ್ಕಾಗಿ ಸಂದ ರಾಷ್ಟ್ರ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.


Click it and Unblock the Notifications











