ಶೇಷಾದ್ರಿಪುರಂ ಕಾಲೇಜಿನಲ್ಲಿ ಮೊಳಗಿದ ಗಾನಯಾನ
ಬದಲಾದ ಕಾಲಘಟ್ಟದಲ್ಲಿಯು ಕನ್ನಡದ ಹಳೆಯ ಚಿತ್ರಗೀತೆಗಳು ಮನ ಮತ್ತು ಹೃದಯ ತುಂಬುವ ಮಾಧುರ್ಯ ಉಳಿಸಿಕೊಂಡಿವೆ ಎಂದು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಯಲಹಂಕದಲ್ಲಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಗಾನಯಾನ ಕಾರ್ಯಕ್ರಮದ ಉದ್ಫಾಟನೆ ನೆರವೇರಿಸಿ ಅವರು ಮಾತನಾಡಿದರು. [ರಿಯಲ್ ಸ್ಟಾರ್ ಉಪೇಂದ್ರ ಋಣ ಸಂದಾಯ!]

ಅಂದಿನ ಸಾಹಿತಿಗಳು, ಸಂಗೀತ ನಿರ್ದೇಶಕರು ಹಾಗೂ ಸಂಯೋಜಕರುಗಳು ಚಿತ್ರಕ್ಕೆ ಜೀವತುಂಬುವಂತಹ ಅರ್ಥಭರಿತ, ಸಾಹಿತ್ಯಭರಿತ ಹಾಗೂ ಸಮಾಜಕ್ಕೆ ಸಂದೇಶ ಸಾರುವ ಹಾಡುಗಳನ್ನು ರಚಿಸಿದ್ದರ ಫಲವಾಗಿ ಇಂದಿಗೂ ಕೂಡ ಕನ್ನಡ ಚಿತ್ರರಂಗದ ಹಾಡುಗಳು ಬೇರೆ ಭಾಷೆಯ ಹಾಡುಗಳಿಗೆ ಸರಿಸಮಾನವಾಗಿ ಮುನ್ನಡೆದಿದೆ ಎಂದು ಹೇಳುತ್ತಾ ಎಲ್ಲಾ ಸಂಗೀತ ನಿರ್ದೇಶಕರ ಸಾಹಿತ್ಯದ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಮಾತನಾಡಿ, ಹಳೆಯ ಚಿತ್ರಗಳ ಸಂಗೀತದಲ್ಲಿ ಅರ್ಥಪೂರ್ಣ ಸಾಹಿತ್ಯ, ಮನತುಂಬುವ ಮಾಧುರ್ಯ, ಸಮಾಜಕ್ಕೆ ಸಂದೇಶ ನೀಡುವಂತಹ ಸತ್ವವಿದ್ದು, ಅವುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪರಿಕಲ್ಪನೆಯಲ್ಲಿ ವಾರ್ತಾ ಇಲಾಖೆ ಗಾನಯಾನ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಹಮ್ಮಿಕೊಂಡಿದೆ.
ಯುವ ಪೀಳಿಗೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಪ್ರಧಾನ ಕಾರ್ಯದರ್ಶಿ ಡಾ. ವೊಡೇಪಿ ಕೃಷ್ಣ ಅವರು ಮಾತನಾಡಿ ಬೇರೆ ಯಾವುದೇ ಭಾಷೆ ಹಾಡುಗಳಿಗೆ ಕಡಿಮೆಯಿಲ್ಲದಂತೆ ಕನ್ನಡ ಚಿತ್ರಗೀತೆಗಳು ಸತ್ವ ಮಾಧುರ್ಯದಿಂದ ಕೂಡಿವೆ ಎಂದು ಕೆಲವೊಂದು ಚಿತ್ರಗಳ ಹಾಡಿನ ಸಾಲುಗಳನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ನಿರ್ದೇಶಕ ಡಾ. ಎಂ. ಪ್ರಕಾಶ್, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಆರ್. ಕೆ. ಶಿವರಾಂ, ಉಪ ನಿರ್ದೇಶಕ ಹೆಚ್. ಬಿ. ದಿನೇಶ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಎನ್. ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಶಬ್ಬೀರ್ ಮತ್ತು ತಂಡದವರಿಂದ ಪ್ರಸ್ತುತಪಡಿಸಿದ ಹಳೆಯ ಹಾಡುಗಳಿಗೆ ನಿರೂಪಕಿ ಅಪರ್ಣಾ ಅವರು ಅರ್ಥಪೂರ್ಣ ವಿವರಣೆ ನೀಡಿದರು. ಸಂಗೀತಕ್ಕೆ ಪ್ರೇಕ್ಷಕರಿಂದ ಹೃದಯ ತುಂಬಿದ ಮೆಚ್ಚುಗೆ ವ್ಯಕ್ತವಾಯಿತು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











