'ವಾರಿಸು' ಆಡಿಯೋ ಲಾಂಚ್: ನಿರ್ಮಾಪಕರ ವಿರುದ್ಧ ಸಿಡಿದೆದ್ದ ವಿಜಯ್ ಅಭಿಮಾನಿಗಳು
ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪ್ರಮುಖರು ತಮಿಳಿನ ಸ್ಟಾರ್ ನಟ ವಿಜಯ್. ಇವರ ನಟನೆಯ 'ವಾರಿಸು' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು ಇಂದು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದೆ.
ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ 'ವಾರಿಸು' ಸಿನಿಮಾದ ಆಡಿಯೋ ಲಾಂಚ್ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.
ಆದರೆ ಕಾರ್ಯಕ್ರಮಕ್ಕೆ ಹಲವು ಅಭಿಮಾನಿಗಳಿಗೆ ಪ್ರವೇಶ ನಿರಾಕರಿಸಲಾಗಿದೆಯಂತೆ. ಸಾಮಾನ್ಯವಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ಅಥವಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಇರುತ್ತದೆ ಆದರೆ 'ವಾರಿಸು' ಸಿನಿಮಾದ ಆಡಿಯೋ ಲಾಂಚ್ಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ಕೆಲವು ಅಭಿಮಾನಿಗಳು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು
ಆಡಿಯೋ ಲಾಂಚ್ಗಾಗಿ ಟಿಕೆಟ್ ಮಾರಾಟ ಮಾಡಲಾಗಿದ್ದು ಆದರೆ ಟಿಕೆಟ್ ಮಾರಾಟದ ಬಗ್ಗೆ ಅಭಿಮಾನಿಗಳಿಗೆ ಸೂಕ್ತವಾಗಿ ಮಾಹಿತಿ ನೀಡಿರಲಿಲ್ಲ ಹಾಗಾಗಿ ಸಾವಿವಾರು ಅಭಿಮಾನಿಗಳು ಕಾರ್ಯಕ್ರಮವನ್ನು ನೋಡಲಾಗದೆ ತೆರಳಬೇಕಾಯ್ತು ಎಂದು ಅಭಿಮಾನಿಗಳು ದೂರಿದ್ದಾರೆ. ಇದರ ಸಂಬಂಧಿಸಿದ ಕೆಲವು ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೆಲವರು ವಿರೋಧಿಸಿದ್ದಾರೆ
ಆದರೆ ಇನ್ನು ಕೆಲವು ಅಭಿಮಾನಿಗಳು ಇದನ್ನು ವಿರೋಧಿಸಿದ್ದು, ಕಾರ್ಯಕ್ರಮದಲ್ಲಿ ಸೀಟು ವ್ಯವಸ್ಥೆ ಮಾಡಲಾಗಿತ್ತು, ಹಾಗಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದಲ್ಲಿ ಸೀಟು ತುಂಬುವವರೆಗೆ ಅಭಿಮಾನಿಗಳಿಗೆ ಅವಕಾಶ ನೀಡಲಾಯ್ತು. ಆ ನಂತರ ಬಂದವರಿಗೆ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ.

ಅಭಿಮಾನಿಗಳು-ಪೊಲೀಸರ ನಡುವೆ ಘರ್ಷಣೆ
ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋಗಳ ಪ್ರಕಾರ ಅಭಿಮಾನಿಗಳು ಹಾಗೂ ಪೊಲೀಸರ ನಡುವೆ ಕಾರ್ಯಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ಪೊಲೀಸರು ಪಾಸ್ ಅಥವಾ ಟಿಕೆಟ್ ತೋರಿಸುವಂತೆ ಅಭಿಮಾನಿಗಳನ್ನು ಕೇಳಿದ್ದಾರೆ. ಟಿಕೆಟ್ ತೋರಿಸಿದ ಅಭಿಮಾನಿಗಳನ್ನಷ್ಟೆ ಕಾರ್ಯಕ್ರಮಕ್ಕೆ ಬಿಟ್ಟಿದ್ದಾರೆ.

ಜನವರಿ 12 ರಂದು ಸಿನಿಮಾ ಬಿಡುಗಡೆ
'ವಾರಿಸು' ಸಿನಿಮಾವನ್ನು ತೆಲುಗಿನ ದಿಲ್ ರಾಜು ನಿರ್ಮಾಣ ಮಾಡಿದ್ದು, ಅಭಿಮಾನಿಗಳಿಗೆ ಸೂಕ್ತವಾಗಿ ಪ್ರವೇಶ ವ್ಯವಸ್ಥೆ ಮಾಡದೇ ಇರುವ ಬಗ್ಗೆ ದಿಲ್ ರಾಜುಗೆ ಅಭಿಮಾನಿಗಳು ಹಿಡಿ ಶಾಪ ಹಾಕಿದ್ದಾರೆ. 'ವಾರಿಸು' ಸಿನಿಮಾವು ಜನವರಿ 12 ರಂದು ತೆರೆಗೆ ಬರಲಿದೆ. ಸಿನಿಮಾವು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡಗುಡೆ ಆಗಲಿದ್ದು, ಸಿನಿಮಾದ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.


Click it and Unblock the Notifications











