ಹುಟ್ಟಿದ ಊರನು ಬಿಟ್ಟು ಬಂದ ಮೇಲೆ...: ಹಾಡು ಇಂದಿಗೆ ಹೆಚ್ಚು ಪ್ರಸ್ತುತ ಎಂದ ಯೋಗರಾಜ್ ಭಟ್
ಇದು ಎಲ್ಲರೂ ಊರಿಗೆ ಹೋಗುವ ಸಮಯ. ವಿದೇಶದಲ್ಲಿರುವವರು ಸ್ವದೇಶಕ್ಕೆ, ಹೊರ ರಾಜ್ಯದಲ್ಲಿರುವವರು ತಮ್ಮ ರಾಜ್ಯಕ್ಕೆ, ಬದುಕು ಕಂಡುಕೊಳ್ಳಲು ನಗರಕ್ಕೆ ಬಂದವರು, ಮತ್ತೆ ತಮ್ಮ ಹಳ್ಳಿಗೆ ಮರಳುತ್ತಿದ್ದಾರೆ. ಹುಟ್ಟಿದ ಊರೇ ಸುರಕ್ಷಿತ. ಇಲ್ಲಿ ಬದುಕಲು ಜಾಗ, ಕೆಲಸ, ಹಣ ಎಲ್ಲ ಇದೆ ಎಂದು ಬಂದಿದ್ದವರಲ್ಲಿ ಹೆಚ್ಚಿನವರು, ನಗರ, ವಿದೇಶದ ಬದುಕು ಸುರಕ್ಷಿತವಲ್ಲ, ಇಲ್ಲಿ ಕೆಲಸವೂ ಉಳಿದಿಲ್ಲ, ಹಣವಂತೂ ಎಲ್ಲ ಖಾಲಿ... ಊರಲ್ಲಿ ಇದ್ದರೆ ಹೇಗಾದರೂ ಬದುಕಬಹುದು ಎಂದು ವಾಪಸ್ ಹೊರಡುತ್ತಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ಯೋಗರಾಜ್ ಭಟ್ಟರು ಬರೆದ ಹಾಡು ಹೆಚ್ಚು ಸೂಕ್ತ ಎನಿಸುವಂತಿದೆ. ಕ್ರಿಶ್ ಜೋಷಿ ನಿರ್ದೇಶನದ 'ಪರಪಂಚ' ಚಿತ್ರಕ್ಕೆ ಭಟ್ಟರ ಲೇಖನಿ ಅದ್ಭುತ ಹಾಡೊಂದನ್ನು ಸೃಷ್ಟಿಸಿತ್ತು. ಅದು ಊರನ್ನು ಬಿಟ್ಟು ನಗರಕ್ಕೆ ಬರುವ ಲಕ್ಷಾಂತರ ಮಂದಿಯ ಮನಸಿನ ಮಾತನ್ನು ಧ್ವನಿಸುಂತಿತ್ತು. ಆ ಹಾಡನ್ನು ಈಗ ಸ್ವತಃ ಯೋಗರಾಜ್ ಭಟ್ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಹುಟ್ಟಿದ ಊರನು ಬಿಟ್ಟು ಬಂದ ಮೇಲೆ...
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ? ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ
ಈ ಹಾಡಿನ ಸಾಲುಗಳು ಪ್ರಸ್ತುತದ ಸನ್ನಿವೇಶವನ್ನು ನೋಡಿಯೇ ಯೋಗರಾಜ್ ಭಟ್ಟರು ಬರೆದ ಹಾಗಿದೆಯಲ್ಲವೇ?

ಇಂದಿಗೆ ಹೆಚ್ಚು ಪ್ರಸ್ತುತ
ನಾವೆಲ್ಲರೂ ಎಲ್ಲಿಂದಲೋ ಬಂದವರು
ಎಲ್ಲಿಗೋ ಹೊಂಟವರು
ಅಲ್ಲಿಂದ ಇಲ್ಲಿಗೆ
ಇಲ್ಲಿಂದ ಅಲ್ಲಿಗೆ
ಅಲ್ಲಿಂದ ಎಲ್ಲಿಗೆ..?
ಇದು ಸದಾ ಕಾಡುವ ಭಾವ..
ಎಂದೋ ಬರೆದ ಹಾಡು ಇಂದಿಗೆ ಹೆಚ್ಚು ಪ್ರಸ್ತುತ - ಎಂದು ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಭಟ್ಟರ ನಿರ್ಮಾಣದ ಚಿತ್ರ
ಯೋಗರಾಜ್ ಮೂವೀಸ್ ಬ್ಯಾನರ್ನಲ್ಲಿ ಕ್ರಿಶ್ ಜೋಷಿ ನಿರ್ದೇಶನದ 'ಪರಪಂಚ' ಚಿತ್ರ 2016ರಲ್ಲಿ ಬಿಡುಗಡೆಯಾಗಿತ್ತು. ದಿಗಂತ್, ರಾಗಿಣಿ ದ್ವಿವೇದಿ, ಅಶೋಕ್, ಅನಂತ್ ನಾಗ್, ರಂಗಾಯಣ ರಘು, ಯೋಗರಾಜ್ ಭಟ್ ಮುಂತಾದವರು ನಟಿಸಿದ್ದ ಚಿತ್ರ, ಯಶಸ್ಸು ಕಾಣದೆ ಇದ್ದರೂ ಹಾಡುಗಳು ಹಿಟ್ ಆಗಿದ್ದವು. ಅದರಲ್ಲಿ ಒಂದು ಹಾಡು ಜನರ ಮನಸಿನ ಆಳಕ್ಕೆ ಇಳಿದಿತ್ತು.

ಹುಚ್ಚ ವೆಂಕಟ್ ದನಿಯಲ್ಲಿ...
'ಹುಟ್ಟಿದ ಊರನು ಬಿಟ್ಟು ಬಂದ ಮೇಲೆ' ಹಾಡನ್ನು ಮೂಲದಲ್ಲಿ ಸಂಗೀತ ಸಂಯೋಜನೆ ಮಾಡಿದ್ದ ವೀರ್ ಸಮರ್ಥ್ ಅವರೇ ಹಾಡಿದ್ದರು. ಆದರೆ ಆಗ ನಟ ಹುಚ್ಚ ವೆಂಕಟ್ ವಿವಾದಗಳಿಂದ ಹೆಚ್ಚು ಸುದ್ದಿಯಲ್ಲಿದ್ದರು. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಅವರು ಈ ರೀತಿಯ ವರ್ತನೆಗಳಿಂದ ದೂರ ಸರಿಯುವಂತೆ ಮತ್ತು ಅವರ ಮೇಲಿನ ಕಳಂಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಹುಚ್ಚ ವೆಂಕಟ್ ಅವರಿಂದ ಈ ಹಾಡು ಹಾಡಿಸಲಾಗಿತ್ತು. ಬಳಿಕ ಅದು ಸೂಪರ್ ಹಿಟ್ ಆಗಿತ್ತು. ಅವರ ಕಂಠದಲ್ಲಿ ಆ ಸಾಲುಗಳು ಜನರಿಗೆ ಇನ್ನೂ ಹತ್ತಿರವಾಗಿದ್ದವು.


Click it and Unblock the Notifications











