60 ಲಕ್ಷ ನಿಧಿ ಸಂಗ್ರಹಿಸಿದ ಕನ್ನಡ ಚಿತ್ರೋದ್ಯಮ
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಕನ್ನಡ ಚಿತ್ರೋದ್ಯಮ ಸಂಗ್ರಹಿಸಿದ ಒಟ್ಟು ರು.60 ಲಕ್ಷಗಳನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನವೆಂಬರ್ 1ರಂದು ವಿಧನಾಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರನಟ ಡಾ.ರಾಜ್ ಕುಮಾರ್ ಅವರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ರಾಕ್ ಲೈನ್ ವೆಂಕಟೇಶ್, ಅಶೋಕ್, ಥಾಮಸ್ ಡಿ ಸೋಜ ಮತ್ತು ಸಾ.ರಾ.ಗೋವಿಂದು ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಿಸಿದರು. ವೇದಿಕೆಯಲ್ಲಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಉಪಸ್ಥಿತರಿದ್ದರು.
ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕನ್ನಡ ಚಿತ್ರೋದ್ಯಮ ಹಣ ಸಂಗ್ರಹದಲ್ಲಿ ತೊಡಗಿಕೊಂಡಿದೆ. ನೆರೆ ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿಕೊಡುವ ಪ್ರಯತ್ನವನ್ನ್ನು ಮಾಡುತ್ತಿದ್ದೇವೆ ಎಂದು ಜಯಮಾಲಾ ತಿಳಿಸಿದರು. ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರ ನಿಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರು.50 ಕೋಟಿ ಸಲ್ಲಿಸಿತು.
ನೆರೆಸಂತ್ರಸ್ತರಿಗೆ ನೆರವಿನ ಹಸ್ತ ನೀಡಿದ ಕೆಎಫ್ ಸಿಸಿ ಹಾಗೂ ಬಿಡಿಎಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆಗಳನ್ನು ತಿಳಿಸಿದರು. ನೆರೆ ಸಂತ್ರಸ್ತರ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲರೂ ಒಟ್ಟಿಗೆ ಕೈಜೋಡಿಸಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬದುಕನ್ನು ಕಟ್ಟಿಕೊಡೋಣ ಎಂದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











