ಚಲನಚಿತ್ರರಂಗದ ಅಮೃತಮಹೋತ್ಸವ ಸಂಭ್ರಮ

ಇತ್ತೀಚಿನ ವರದಿ ಬಂದಂತೆ, ಕಮಲಹಾಸನ್ ಅವರು ನಗರಕ್ಕೆ ಆಗಮಿಸಿದ್ದು, ಅರಮನೆ ಮೈದಾನದ ಕಡೆಗೆ ತೆರಳಿದ್ದಾರೆ. ಕನ್ನಡ ಚಿತ್ರರಂಗ ಅಷ್ಟು ನಟ ನಟಿಯರು ಒಂದೇ ವೇದಿಕೆಯನ್ನು ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿ, ಸಂಭ್ರಮದಿಂದ ಹಾಡಿ ಕುಣಿಯಲು ಕಾತುರರಾಗಿದ್ದಾರೆ. ಕೆಲವರು 100 X 100 ವೇದಿಕೆ ಹಿಂಬಂದಿಯಲ್ಲಿ ಕನಸುಗಾರ ರವಿಚಂದ್ರನ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂತಿಮ ತಯಾರಿ ನಡೆಸುತ್ತಿದ್ದಾರೆ.
ಪಾಸ್ ಗಳ ಗೊಂದಲ ಮುಂದುವರೆದಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂದು ಹೇಳಲಾಗಿದ್ದರೂ ಜನ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿಲ್ಲ. 30 ಸಾವಿರದಷ್ಟು ಜನ ನೆರೆದಿದ್ದಾರೆ. ಮೇಕ್ರಿ ಸರ್ಕಲ್ , ಅರಮನೆ ಮೈದಾನದ ಬಳಿ ಸಂಚಾರ ದಟ್ಟಣೆ ಅಧಿಕವಾಗಿದೆ. ವಾಹನ ನಿಲುಗಡೆ ಸಮಸ್ಯೆಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಅರಮನೆ ಮೈದಾನದತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇಂದು ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ ಕುಮಾರ್ ಅವರ ಸಮಾಧಿ ಬಳಿಯಿಂದ ಅರಮನೆ ಮೈದಾನದವರೆಗೆ ಚಲನಚಿತ್ರ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಸಿನಿ ಕಾರ್ಮಿಕರ ಸಂಘಟನೆಗಳು ಮೆರವಣಿಗೆ ನಡೆಸಿದರು. ಸ್ತಬ್ಧ ಚಿತ್ರಗಳ ಜೊತೆ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈಗ ಎಲ್ಲರೂ ಅರಮನೆ ಮೈದಾನವನ್ನು ತಲುಪಿದ್ದಾರೆ.
ವಾಟಾಳ್ ಮೆರವಣಿಗೆ, ಸಹ ಕಲಾವಿದರ ಧರಣಿ
ಕನ್ನಡಚಿತ್ರಗಳ ಕಡ್ಡಾಯ ಪ್ರದರ್ಶನಕ್ಕೆ ಒತ್ತಾಯಿಸಿ. 1962 ಸೆ. 7 ರಂದು ವಾಟಾಳ್ ನಾಗಾರಾಜ್ ಅವರು ಅಂದಿನ ಅಲಂಕಾರ್ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿ, ಬಂಧಿತರಾಗಿ ಉಪ್ಪಾರ ಪೇಟೆ ಠಾಣೆಯಲ್ಲಿ ಬೂಟ್ಸ್ ಏಟು ತಿಂದ ಸವಿನೆನಪಿನ ಹಿನ್ನೆಲೆಯಲ್ಲಿ ಇಂದು ಮೆರವಣಿಗೆ ನಡೆಸಲಾಯಿತು.
ಒಂಟೆಯ ಮೇಲೆ ಕುಳಿತ ವಾಟಾಳ್ ಅಲಂಕಾರ್ ಪ್ಲಾಜಾ(ಅಲಂಕಾರ ಚಿತ್ರಮಂದಿರವಿದ್ದ ಸ್ಥಳ) ಜಾಗದಿಂದ ಚಿಕ್ಕಪೇಟೆ ಉಪವಿಭಾಗದ ಎಸಿಪಿ ಕಚೇರಿಯವರೆಗೆ ಮೆರವಣಿಗೆ ಮಾಡಿದರು.
ಈ ಮಧ್ಯೆ ಸಹ ಕಲಾವಿದರ ಸಂಘದವರು ತಮಗೆ ಸರಿಯಾದ ಪ್ರಾತಿನಿಧ್ಯ ನೀಡಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಅವರು ಅನ್ಯಾಯ ಮಾಡಿದ್ದಾರೆ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಎಲ್ಲದರ ಮಧ್ಯೆ ಮೆಚ್ಚಿನ ತಾರೆಗಳನ್ನು ನೋಡಲು ಕಾತುರದಿಂದ ಕಾದಿರುವ ಅಭಿಮಾನಿಗಳಿಗೆ ಎಲ್ಲೆಡೆ ಕಾಣುವ ನಗುಮೊಗದ ರಾಜ್ ಭಾವಚಿತ್ರ ಎಲ್ಲ ನೋವನ್ನು ಮರೆಸಿ ಆನಂದದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದೆ.
ಅಮೃತ ಮಹೋತ್ಸವಕ್ಕೆ ರಜನಿ ಮತ್ತು ಕಮಲ್!


Click it and Unblock the Notifications











