ಜೋಗಯ್ಯನ ಜೊತೆ ರಾಣಿ ಮುಖರ್ಜಿ, ತಮನ್ನಾ
ಭೂಗತ ಜಗತ್ತಿನ ಕಥಾ ಹಂದರವುಳ್ಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ'. ಈ ಚಿತ್ರದಲ್ಲಿ ಭೂಗತ ಜಗತ್ತಿನೊಂದಿಗೆ ಭೂತ ಹಾಗೂ ವರ್ತಮಾನ ಕಾಲದ ರಾಜಕೀಯ ಬೆರೆತಿರುವುದನ್ನು ತೋರಿಸಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಇತ್ತೀಚೆಗೆ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರ ಸಹ ಬಳ್ಳಾರಿ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಬೆಳಕು ಚೆಲ್ಲಿತ್ತು. ಇದೀಗ ಪ್ರೇಮ್ ನಿರ್ದೇಶಿಸಲಿರುವ 'ಜೋಗಯ್ಯ' ಚಿತ್ರವೂ ಇದೇ ರೀತಿಯ ರಾಜಕೀಯ ಅಂಶಗಳನ್ನು ಒಳಗೊಂಡ ಚಿತ್ರವಾಗಿರುತ್ತದೆ ಎನ್ನಲಾಗಿದೆ.
ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಅವರಿಗೆ ಭೂಗತ ಚಿತ್ರಗಳು ಹೊಸದಲ್ಲ. ಈ ಹಿಂದೆ ಓಂ, ಜೋಗಿ, ಹ್ಯಾಟ್ರಿಕ್ ಹೊಡಿಮಗ ಹಾಗೂ ಮಾದೇಶ ಚಿತ್ರಗಳಲ್ಲಿ ಮಚ್ಚು ಹಿಡಿದ ಅನುಭವ ಶಿವಣ್ಣ ಅವರಿಗಿದೆ. ಕರಿಯಾ, ಜೋಗಿ ಮೂಲಕ ಭೂಗತ ಜಗತ್ತಿನ ರಕ್ತಸಿಕ್ತ ಕತೆ ಸುತ್ತಿದ್ದ ಅನುಭವ ಪ್ರೇಮ್ ಬೆನ್ನಿಗಿದೆ. ಒಟ್ಟಿನಲ್ಲಿ ಈಗ ಮತ್ತೊಂದು ಭೂಗತ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.
ಜೋಗಯ್ಯ ಚಿತ್ರವನ್ನು ಪ್ರೇಮ್ ಪತ್ನಿ ರಕ್ಷಿತಾ ನಿರ್ಮಿಸಲಿದ್ದಾರೆ. ಈ ಚಿತ್ರಕ್ಕೆ ನಾಲ್ಕು ಮಂದಿ ನಾಯಕಿಯರು. ಬಾಲಿವುಡ್ ನ ರಾಣಿ ಮುಖರ್ಜಿ ಹಾಗೂ ತಮನ್ನಾ ಅವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ವರನಟ ರಾಜ್ ಅವರ ಹುಟ್ಟುಹಬ್ಬದ ದಿನ ಏ.24ರಂದು ಚಿತ್ರ ಸೆಟ್ಟೇರಬೇಕಾಗಿತ್ತು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಶಿವಣ್ಣನ ಹುಟ್ಟುಹಬ್ಬದ ದಿನ ಜುಲೈ 12ಕ್ಕೆ ಜೋಗಯ್ಯನಿಗೆ ಮುಹೂರ್ತ ಫಿಕ್ಸ್ ಆಗಿದೆ.


Click it and Unblock the Notifications











