ಅನಾಥಶ್ರಮ ಮಕ್ಕಳಿಗೆಲ್ಲಾ ಗಣೇಶ್ ಉಡುಗೊರೆ!
ಗೋಲ್ಡನ್ ಸ್ಟಾರ್ ಗಣೇಶ್ ಗೆ ಪಂಚತಾರಾ ಹೋಟೆಲ್ ಗಿಂತ ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೆಚ್ಚು ಖುಷಿ ಕೊಟ್ಟಿದೆಯಂತೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಗಣೇಶ್ ಹುಟ್ಟುಹಬ್ಬಕ್ಕೆ(ಜುಲೈ 2)ವಿಡ್ಸರ್ ಮ್ಯಾನರ್ ಹೋಟೆಲ್ ಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಗಣೇಶ್ ಅನಾಥಾಶ್ರಮದ ಮಕ್ಕಳೊಂದಿಗೆ ಕಳೆದದ್ದು ಗೊತ್ತೇ ಇದೆ.
ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಶಿವಶಕ್ತಿ ಅನಾಥಾಶ್ರಮದ ಬೌದ್ಧಿಕ ವಿಕಲಚೇತನ ಮಕ್ಕಳೊಂದಿಗೆ ಗಣೇಶ್ ಕೆಲಕಾಲ ಕಳೆದಿದ್ದರು. ದೀಪಕ್ ಎಂಬ ಬಾಲಕ ಗಣೇಶ್ ರನ್ನು ಒಂದು ಕೈಗಡಿಯಾರ ಕೊಡಿಸುವಂತೆ ಕೇಳಿದ್ದ. ಮುಗ್ಧ ಬೇಡಿಕೆಗೆ ಗಣೇಶ್ ಮೂಕನಾಗಿ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಶನಿವಾರ(ಜು.4) ಬೆಳಗ್ಗೆ ದೀಪಕ್ ಗೆ ಕೊಡಲು ಕೈಗಡಿಯಾರ ತೆಗೆದುಕೊಂಡು ಹೋಗಿದ್ದರು. ಇದನ್ನು ನೋಡಿದ ಉಳಿದ ಮಕ್ಕಳು ಸುಮ್ಮನೆ ಇರಲು ಸಾಧ್ಯವೇ? ತಮಗೂ ಕೈಗಡಿಯಾರ ಕೊಡಿಸೆಂದು ದುಂಬಾಲು ಬಿದ್ದರು. ಗಣೇಶ್ ಅಲ್ಲಿರುವ 34 ಮಕ್ಕಳಿಗೂ ಕೈಗಡಿಯಾರ ಕೊಡಿಸಿದ್ದಾರೆ.
ಇಷ್ಟಕ್ಕ್ಕೆ ಸುಮ್ಮನಾಗ ಗಣೇಶ್ ಅನಾಥಾಶ್ರಮಕ್ಕೆಅಕ್ಕಿ ಸೇರಿದಂತೆ ದಿನಸಿ ಪದಾರ್ಥಗಳನ್ನು ದಾನಮಾಡಿ ಕೃತಾರ್ಥರಾಗಿದ್ದಾರೆ. ಪಂಚತಾರಾ ಹೋಟೆಲ್ ಗಿಂತಲೂ ಮಕ್ಕಳೊಂದಿಗೆ ಕಳೆದ ಕ್ಷಣಗಳು ಸಾರ್ಥಕ ಎಂಬುದು ಗಣೇಶ್ ಕೊಡುವ ವಿವರಣೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











