ಎಲ್ ಕೆ ಆಡ್ವಾಣಿ ಆಶೀರ್ವಾದಗಳೊಂದಿಗೆ ಜೋಗಯ್ಯ
ಚಿತ್ರ ನಿರ್ದೇಶಕ ಪ್ರೇಮ್ ಗಿಮಿಕ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕ್ ಅಂತೂ ಮಾಡುತ್ತಿದ್ದಾರೆ. ಅವರ ಮಹತ್ವಾಕಾಂಕ್ಷಿ ಚಿತ್ರ 'ಜೋಗಯ್ಯ' ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹೊರಬೀಳುತ್ತಿವೆ. ಈ ಚಿತ್ರ ಜುಲೈ 12ರಂದು ಸೆಟ್ಟೇರಲಿದ್ದು ಮುಹೂರ್ತ ಕಾರ್ಯಕ್ರಮಕ್ಕೆ ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ ಆಗಮಿಸಲಿದ್ದಾರೆ ಎನ್ನುತ್ತವೆ ಮೂಲಗಳು.
ಜುಲೈ 12ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. 'ಜೋಗಯ್ಯ' ಚಿತ್ರದ ಮೂಲಕ ಶಿವಣ್ಣ ಸೆಂಚುರಿ ಬಾರಿಸಲಿದ್ದಾರೆ. ಹಾಗಾಗಿ ಈ ಚಿತ್ರದ ಬಗ್ಗೆ ಕನ್ನಡ ಚಿತ್ರೋದ್ಯಮದ ನಿರೀಕ್ಷೆಗಳು , ಪ್ರೇಕ್ಷಕರ ಕಾತುರಗಳು ಗರಿಗೆದರಿವೆ. ಸಹಜವಾಗಿಯೇ 'ಜೋಗಯ್ಯ'ನ ಬಗ್ಗೆ ಕುತೂಹಲ ಮನೆ ಮಾಡಿದೆ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ನಡೆಯಲಿದೆ. ಮುಹೂರ್ತದ ಆಹ್ವಾನ ಪತ್ರಿಕೆಯನ್ನು ಪ್ರೇಮ್ ತುಂಬ ಜಾಣ್ಮೆಯಿಂದ ರೂಪಿಸಿದ್ದಾರೆ. ಆಡ್ವಾಣಿ ಅವರ ಆಶೀರ್ವಾದಗಳೊಂದಿಗೆ ಎಂದು ಪ್ರಕಟಿಸುವ ಮೂಲಕ ಕುತೂಹಲವನ್ನು ಪ್ರೇಮ್ ಕಾದಿರಿಸಿದ್ದಾರೆ. ಪ್ರೇಮ್ ಗಿಮಿಕ್, ಮ್ಯಾಜಿಕ್ ಏನಾಗುತ್ತದೋ ಕಾದು ನೋಡಬೇಕು.
ಆಹ್ವಾನಿತರ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮೆಗಾ ಸ್ಟಾರ್ ಚಿರಂಜೀವಿ, ಗಜಿನಿ ಖ್ಯಾತಿಯ ಸೂರ್ಯ, ಸಂಸದ ಅನಂತಕುಮಾರ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಷ್, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಾರಿಗೆ ಸಚಿವ ಆರ್ ಅಶೋಕ್... ಪಟ್ಟಿ ಮುಂದುವರಿಯುತ್ತದೆ.
ಮಾಹಿತಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಬಾಲಚಂದ್ರ ಜಾರಕಿಹೊಳಿ, ಅಶೋಕ್ ಖೇಣಿ, ವಿ ಸೋಮಣ್ಣ, ಬಸಂತಕುಮಾರ್ ಪಾಟೀಲ್, ರಾಘವೇಂದ್ರ ರಾಜ್ ಕುಮಾರ್, ವಿ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಜಗ್ಗ್ಗೇಶ್, ಗಣೇಶ್, ದುನಿಯಾ ವಿಜಯ್ ಸಹ ಆಗಮಿಸಲಿದ್ದಾರೆ ಎನ್ನುತ್ತದೆ ಆಹ್ವಾನ ಪತ್ರಿಕೆ.


Click it and Unblock the Notifications











