ಚಿತ್ರ ನಿರ್ಮಾಪಕ ಬಿ ಕೆ ಶ್ರೀನಿವಾಸ್ ಸಾಹಿತ್ಯ ಲೋಕಕ್ಕೆ
ಮನುಷ್ಯನ ಜೀವನದಲ್ಲಿ ನಂಬಿಕೆಯೆಂಬುದು ಬಹಳ ಮುಖ್ಯ. ಆ ನಂಬಿಕೆಯಿಂದಲೇ ಮಾನವ ಜೀವನ ಸಾಗುತ್ತಿರುವುದು. ಈ ಸತ್ಯವನ್ನು ಬಹಳ ಚೆನ್ನಾಗಿ ಅರಿತಿರುವ ಬಿ.ಕೆ.ಶ್ರೀನಿವಾಸ್ ಅದನ್ನೇ ಈಗ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಶ್ರೀನಿವಾಸ್ ಈ ಹಿಂದೆ 'ಮಂದಾಕಿನಿ' ಎಂಬ ಚಿತ್ರವನ್ನು ನಿರ್ಮಿಸಿದ್ದರು.
ಇತ್ತೀಚೆಗೆ ಯವನಿಕಾ ಸಭಾಂಗಣದಲ್ಲಿ ಇವರು ಬರೆದ 'ನಂಬಿಕೆಯೇ ಜೀವನ' ಪುಸ್ತಕವನ್ನು ಸಾಹಿತಿ ಸಾ.ಶಿ.ಮರುಳಯ್ಯ ಬಿಡುಗಡೆಗೊಳಿಸಿದರು. ಡಾ:ಬರಗೂರು ರಾಮಚಂದ್ರಪ್ಪ ಅವರ ಅದ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಜನಪದ ಗಾಯಕ ವೇಮಗಲ್ ನಾರಾಯಣಸ್ವಾಮಿ, ಚಿತ್ರನಟ ಸುಂದರರಾಜ್ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಾ.ಶಿ.ಮರುಳಯ್ಯ ಅವರು ಮನೆಮನೆಗೆ ಹಾಲು ಮಾರಿಕೊಂಡು ಬಂದ ಶ್ರೀನಿವಾಸ್ ಇಂದು ನೂರಾರು ಜನರಿಗೆ ಉದ್ಯೋಗ ನೀಡುವಂಥವರಾಗಿದ್ದಾರೆ. ಜೀವನ ಕೃಷಿಯಲ್ಲಿ ಅನುಭವ ಪಡೆದು ಈಗ ಸಾಹಿತ್ಯ ಕೃಷಿ ಪ್ರಾರಂಭಿಸಿದ್ದಾರೆ. ಅವರು ಪಡೆದಿರುವ ಜನಪ್ರಿಯತೆಗೆ ಈ ಸಭಾಂಗಣ ತುಂಬಿರುವುದೇ ಸಾಕ್ಷಿ. ಜೀವನಕ್ಕೆ ಹತ್ತಿರವಾದ ಸರಳ ನುಡಿಗಳನೇ ಬಳಸಿ ಕೃತಿ ಬರೆದಿದ್ದಾರೆ. ಬರಗೂರು ರಾಮಚಂದ್ರಪ್ಪನವರು ಪುಸ್ತಕಕ್ಕೆ ಮುನ್ನುಡಿ ಬರೆದು ಅದರ ಮೌಲ್ಯವನ್ನು ಇನ್ನೂ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ ಸಾಹಿತ್ಯ ರಚಿಸಲು ಅನುಭವ, ಅಧ್ಯಯನ ಶೀಲತೆ ಎರಡೂ ಇರಬೇಕು. ಶ್ರೀನಿವಾಸ್ ಅವರಿಗೆ ಅನುಭವ ಇದೆ. ಅಧ್ಯಯನ ಶೀಲತೆ ಕಡಿಮೆ ಇದೆ. ತನ್ನಗನಿಸಿದ್ದನ್ನು ಬರೆದಿದ್ದಾರೆ. ಶ್ರೀನಿವಾಸ್ ಭ್ರಮೆಯಿಂದ ಹೊರ ಬರುತ್ತಿದ್ದಾರೆ. ಸಾಹಿತ್ಯ ಪ್ರಪಂಚಕ್ಕೆ ಅಂಬೆಗಾಲಿಡುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ವತ್ಸಲಾಮೋಹನ್ ಅಚ್ಚುಕಟ್ಟಾಗಿ ನಿರೂಪಿಸಿಕೊಟ್ಟರು.


Click it and Unblock the Notifications











