ಕರ್ನಾಟಕ ರಜನಿ ಅಭಿಮಾನಿಗಳಿಂದ ಲಿಂಗಾರ್ಪಣೆ
ತಮಿಳು ಚಿತ್ರಗಳ ಅಭಿಮಾನಿಗಳು ಒಂದು ರೀತಿ ವಿಲಕ್ಷಣ ಸ್ವಭಾವದವರು. ಈ ಮಾತಿಗೆ ಪುಷ್ಠಿ ನೀಡುವಂತೆ ಈಗಾಗಲೇ ತಮ್ಮ ನೆಚ್ಚಿನ ತಾರೆಯರಿಗೆ ಗುಡಿ, ಗೋಪುರಗಳನ್ನುಕಟ್ಟಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ ತಮಿಳು ಚಿತ್ರರಸಿಕರು.
ತಮಿಳರ ಆರಾಧ್ಯ ನಟಿಯರಲ್ಲಿ ಮೊದಲು ಖುಷ್ಬುಗೆ ಮಂದಿರ ಕಟ್ಟಿಸಲಾಯಿತು. ನಂತರ ನಮಿತಾರಿಗೂ ಹೃದಯದಲ್ಲಿ ಸ್ಥಾನ ಕೊಟ್ಟ ತಮಿಳರು ಆಕೆಗೂ ಒಂದು ಮಂದಿರವನ್ನು ನಿರ್ಮಿಸಿ ಕೃತಾರ್ಥರಾದರು. ಇದೀಗ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕರ್ನಾಟಕದ ಅಭಿಮಾನಿಗಳು ವಿಭಿನ್ನ ಸೇವೆ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿರುವ ಕೋಟಿ ಲಿಂಗೇಶ್ವರ ಆಲಯದಲ್ಲಿ ವಿಶೇಷ ಸಹಸ್ರ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ರಜನಿಕಾಂತ್ ಅವರ ಬಾಳಿನಲ್ಲಿ ಸದಾ ಶಾಂತಿ, ಸಮೃದ್ಧಿ ವೃದ್ಧಿಸಲಿ ಎಂಬ ಉದ್ದೇಶದಿಂದ ಲಿಂಗವನ್ನು ಪ್ರತಿಷ್ಠಾಪಿಸಿದ್ದಾಗಿ ಕರ್ನಾಟಕದ ರಜನಿ ಅಭಿಮಾನಿ ಬಳಗ ತಿಳಿಸಿದೆ.
ವಿಶೇಷ ಪ್ರಾರ್ಥನೆ, ವೇದ ಮಂತ್ರಗಳ ಪಠನೆಯೊಂದಿಗೆ ಪುರೋಹಿತರು ಈ ಲಿಂಗವನ್ನು ಪ್ರತಿಷ್ಠಾಪಿಸಿದ್ದಾಗಿ ಅವರು ತಿಳಿಸಿದ್ದಾರೆ. ಕೋಟಿಲಿಂಗೇಶ್ವರ ಆಲಯದಲ್ಲಿ ಭಕ್ತರು ತಮ್ಮ ಕುಟುಂಬ ಶ್ರೇಯೋಭಿವೃದ್ಧಿಗಾಗಿ ಇಲ್ಲೊಂದು ಲಿಂಗವನ್ನು ಪ್ರತಿಷ್ಠಾಪಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.


Click it and Unblock the Notifications











