ರವಿ ಬೆಳಗೆರೆ ಹೊಸ ಪುಸ್ತಕದ ಹೆಸರು ಕಾಮ ರಾಜ ಮಾರ್ಗ!
ಚಿತ್ರನಟ ಹಾಗೂ ಪತ್ರಕರ್ತ ರವಿ ಬೆಳಗೆರೆ ಸುದೀರ್ಘ ಸಮಯದಿಂದ ಬರೆಯುತ್ತಿರುವ ಪುಸ್ತಕಕ್ಕೆ ಕಡೆಗೂ ನಾಮಕರಣವಾಗಿದೆ. ಈ ವಾರದ 'ಹಾಯ್ ಬೆಂಗಳೂರು' ಸಂಚಿಕೆಯಲ್ಲಿ ತಮ್ಮ ಪುಸ್ತಕದ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕಾದಂಬರಿಯ ಹೆಸರು ಕಾಮ ರಾಜ ಮಾರ್ಗ!
ಈ ಬಗ್ಗೆ ಅವರು 'ಖಾಸ್ ಬಾತ್' ಅಂಕಣದ ಸಾಫ್ಟ್ ಕಾರ್ನರ್ ನಲ್ಲಿ ಬರೆದಿದ್ದಾರೆ. "ಈ ಸವಿಸ್ತಾರವಾದ ಕಾದಂಬರಿಗೆ ಒಂದು ಹೆಸರಿಡಲಿಕ್ಕೆ ತುಂಬ ಕಾದುಬಿಟ್ಟೆ. ಗೆಳೆಯರು ನಾನಾ ತರಹದ ಸಲಹೆಗಳನ್ನು ಕೊಟ್ಟರು. ಕಡೆಗೆ ಮೊನ್ನೆ ರಾತ್ರಿ ನನಗೆ ತೋಚಿದ್ದು ಕವಿ ರಾಜ ಮಾರ್ಗವಲ್ಲ ಕಾಮ ರಾಜ ಮಾರ್ಗ!" ಎಂದಿದ್ದಾರೆ.
ತಮ್ಮ ಹೊಸ ಕಾದಂಬರಿಗೆ ಅಂತಿಮವಾಗಿ ಇದೇ ಹೆಸರನ್ನು ರವಿ ಬೆಳಗೆರೆಯವರು ಖಾಯಂಗೊಳಿಸಿದ್ದಾರೆ. ಈ ಕಾದಂಬರಿ ಬಿಡುಗಡೆಯಾದ ಮೇಲೆ ಏನೇನು ಕಲ್ಲೋಲವಾಗುತ್ತದೋ ಗೊತ್ತಿಲ್ಲ ಎಂಬ ದುಗುಡವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬೇಕಾದ ಕಾನೂನು ಸಂಬಂಧಿ ಕೆಲಸಗಳನ್ನು ಮುಗಿಸಿರುವುದಾಗಿ ತಿಳಿಸಿದ್ದಾರೆ.
ಕಾದಂಬರಿಯ ಮುಖಪುಟವನ್ನು ಪ್ರಖ್ಯಾತ ಕಲಾವಿದ ಸುಧಾಕರ ದರ್ಬೆ ಮಾಡಿದ್ದು ಕೆಲವೇ ದಿನಗಳಲ್ಲಿ ಪುಸ್ತಕ ಓದುಗರ ಕೈಸೇರಲಿದೆ. ಈ ಕಾದಂಬರಿಯ ಜೊತೆಗೆ 'ಪ್ರಮೋದ್ ಮಹಾಜನ್ ಹತ್ಯೆ' ಎಂಬ ಪುಸ್ತಕವೂ ಬಿಡುಗಡೆಯಾಗಲಿದೆ. ರವಿ ಬೆಳಗೆರೆ ಅಭಿಮಾನಿಗಳಿಗಳಿಗೆ ಈ ಬಾರಿ ಒಟ್ಟಿಗೆ ಎರಡು ಪುಸ್ತಕಗಳು ಲಭ್ಯವಾಗಲಿವೆ.


Click it and Unblock the Notifications











