ದಂಡುಪಾಳ್ಯ: ಪಾತಕಲೋಕದ ಅರೆನಗ್ನ ಚಿತ್ರಗಳು

ಕನ್ನಡ ಮಣ್ಣಿನಲಿ ಹುಟ್ಟಿ ಬೆಳೆಯದೆ ಅಲೆಮಾರಿಗಳಾಗಿ ಕೆಲ ದಶಕಗಳ ಹಿಂದೆ ಈ ಪ್ರದೇಶವನ್ನು ವ್ಯಾಪಿಸಿಕೊಂಡ ಆ-ಈ ಪಾಪಿಗಳು ಪಕ್ಕದ ಆಂಧ್ರಪ್ರದೇಶ ರಾಜ್ಯದವರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಲಿ ಕೆಲಸ ಮಾಡುವ, ಜಲ್ಲಿ ಕಾರ್ಮಿಕರಾದ ಇವರುಗಳು ಒಬ್ಬೊಬ್ಬರಾಗಿ ಈ ಪ್ರದೇಶದಲ್ಲಿ ನೆಲೆ ಕಾಣಲಾರಂಭಿಸಿದರು.
ಹತ್ತು, ಇಪ್ಪತ್ತು, ಮೂವತ್ತರಂತೆ ಜಮಾಯಿಸಿಕೊಂಡ ಇವರ ಗುಂಪಿನ ಒಟ್ಟು ಸದಸ್ಯರ ಬಲ 80. ಮೂಲ ಕಸುಬಿನಿಂದ ದೂರ ಸರಿದ ಈ ದಂಡುಪಾಳ್ಯ ಗ್ಯಾಂಗ್, ಪಾತಕ ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟಿತು. ಹೆಣ್ಣು, ಹೊನ್ನಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟುಕೊಂಡ ಗ್ಯಾಂಗ್ ಯಾವುದೇ ಕಿಂಚಿತ್ ಸುಳಿವು ಇಲ್ಲದೆ ಅಮಾಯಕರ ಕೈ ಕಟ್, ಕಾಲ್ ಕಟ್, ರುಂಡಮುಂಡ ಬೇರೆ ಮಾಡಿದ ಅದೆಷ್ಟೋ ಉದಾಹರಣೆಗಳು ಪೋಲೀಸ್ ಮತ್ತು ಗೃಹ ಇಲಾಖೆಯನ್ನು ಅಕ್ಷರಸಃ ಬೆಚ್ಚಿ ಬೀಳಿಸಿತು.
ಕೆಜಿಎಫ್ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಠಾಣೆಯಲ್ಲೇ ಮರ್ಡರ್ ಮಾಡಿದ್ದು ಈ ಪಾತಕಿ ಗ್ಯಾಂಗ್ ಗಳ ನೋಟೆಡ್ ಕ್ರೈಂಗಳಲ್ಲೊಂದು. ಪೋಲೀಸ್ ಇಲಾಖೆ ಪಟ್ಟಿ ಮಾಡಿದ ಪ್ರಕಾರ ದಂಡುಪಾಳ್ಯ ಗ್ಯಾಂಗ್ ಮೇಲೆ ಇರೋ ದುಷ್ಕೃತ್ಯಗಳ ಪಟ್ಟಿಯೆಂದರೆ 57 ಮರ್ಡರ್, 66 ಡಕಾಯಿತಿ, 50ಕ್ಕೂ ಹೆಚ್ಚು ಅತ್ಯಾಚಾರ, ಹಾಫ್ ಮರ್ಡರ್ ಗಳೆಲ್ಲಾ ಲೆಕ್ಕವಿಲ್ಲದಷ್ಟು.
ದೊಡ್ಡ ಹನುಮ, ವೆಂಕಟರಮಣ, ಸೀನ, ಮುನಿಕೃಷ್ಣ, ಗೋಧಿ ತಮ್ಮ, ಲಕ್ಷ್ಮಿ ಮುಂತಾದವರು ಈ ಗ್ಯಾಂಗ್ ನ ಪ್ರಮುಖ ಸದಸ್ಯರು. ಆ ಕಾಲದಲ್ಲಿ ಪೋಲೀಸ್ ಇಲಾಖೆ ಕಂಡ ದಕ್ಷ ಮತ್ತು ಡೈನಾಮಿಕ್ ಪೋಲೀಸ್ ಅಧಿಕಾರಿ ತಮ್ಮಯ್ಯ ಈ ಗ್ಯಾಂಗ್ ಸದಸ್ಯರುಗಳನ್ನು ಒಂದು ಹಂತಕ್ಕೆ ಮಟ್ಟ ಹಾಕಿದ್ದರು.
1999 -2000 ರಲ್ಲಿ ಬೆಂಗಳೂರಿನಿಂದ ಡೆಪ್ಯೂಟೆಶನ್ ಮೇಲೆ ಬಂದ ಪೋಲೀಸ್ ಅಧಿಕಾರಿಯೇ ಚಲಪತಿ. ದಂಡುಪಾಳ್ಯ ಗ್ಯಾಂಗ್ ನ ಪಾತಕಿಗಳಿಗೆ ಇನ್ನೊಂದು ಲೋಕ ತೋರಿಸಿದ ಲಯನ್ ಹಾರ್ಟೆಡ್ ಎಸ್ ಐ ಚಲಪತಿ. ಪಾತಕಿ ಗ್ಯಾಂಗ್ ಮುಟ್ಟಿ ನೋಡಿಕೊಳ್ಳುವಂತೆ ಬೆಂಡೆತ್ತಿದ ಚಲಪತಿ ನೇತೃತ್ವದ ಪೋಲೀಸ್ ಪಡೆ ದಂಡುಪಾಳ್ಯ ಗ್ಯಾಂಗ್ ಅನ್ನು ಹೇಳ ಹೆಸರಿಲ್ಲದೆ ನಿರ್ನಾಮ ಮಾಡಿತು.
ದಂಡುಪಾಳ್ಯದ ಬಗ್ಗೆ ಇಷ್ಟೆಲ್ಲಾ ಯಾಕೆ ನೆನಪಾಯಿತೆಂದರೆ ಭಯಾನಕವಾದ ಒಂದು ಕಥಾನಕ ಧರಿಸಿದ ಒಂದು ಕನ್ನಡ ಸಿನಿಮಾ ನಮ್ಮೆದುರಿಗೆ ಬರುತ್ತಿದೆ. ಚಿತ್ರೀಕರಣ ಹಂತದಲ್ಲಿರುವ ದಂಡುಪಾಳ್ಯಕ್ಕೆ ಮಳೆಹುಡುಗಿ ಪೂಜಾ ಗಾಂಧಿ ನಾಯಕಿ. ಈ ಚಿತ್ರದಲ್ಲಿ ಪೂಜಾ ಅರೆನಗ್ನ ಫೋಸ್ ಕುಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿಷಯ ಕನ್ನಡ ಚಿತ್ರ ಮತ್ತು ಕಿರುತೆರೆ ಸುದ್ದಿಗಳನ್ನು ಗಮನಿಸುವವರಿಗೆ ಗೊತ್ತೇ ಇರುತ್ತದೆ.


Click it and Unblock the Notifications











