ಸಾರಾಯಿ ಶೀಶೆಯಲಿ ಲೂಸ್ ಮಾದನ ಭವಿಷ್ಯ
ತನ್ನದೇ ಆದಂತಹ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡ ನಟ ಲೂಸ್ ಮಾದ ಯೋಗೇಶ್. ಅದಕ್ಕೆ ತಕ್ಕಂತೆ ಅವರ ಚಿತ್ರಗಳು ಬರುತ್ತಿವೆ. ಈಗ ಅಂತಹದ್ದೇ ಹೊಸ ಪ್ರಯತ್ನ ದೇವದಾಸ್. ಈ ಚಿತ್ರ ಮೇ13ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ನ 'ಕೂಲ್' ಚಿತ್ರ ಇದಕ್ಕೂ ಮುನ್ನಾ ದಿನ ಮೇ 12ರಂದು ತೆರೆಗೆ ಅಪ್ಪಳಿಸುತ್ತಿದ್ದು , ಕೆ ಜಿ ರಸ್ತೆಯಲ್ಲಿ ಈ ಎರಡು ಚಿತ್ರಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
"ಸಾರಾಯಿ ಶೀಶೆಯಲಿ ನನ ದೇವಿ ಕಾಣುವಳು..." ಎಂದು ಪಕ್ಕ ದೇವದಾಸ್ ಶೈಲಿಯಲ್ಲಿ ಬಾಟಲಿ ಹಿಡಿದು ಯೋಗೇಶ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾನೆ. ಎಚ್ ಎಂ ಕೃಷ್ಣಮೂರ್ತಿ ನಿರ್ಮಿಸಿರುವ ಈ ಚಿತ್ರ ರಾಜ್ಯದಾದ್ಯಂತ 55 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಎಬಿಸಿಡಿ ಶಾಂತಕುಮಾರ್ ಆಕ್ಷನ್, ಕಟ್ ಹೇಳಿದ್ದಾರೆ. ಹಳೆಚಿತ್ರ ಗೀತೆ ಸಾರಾಯಿ ಶೀಶೆಯಲಿ...ಹಾಡು ಚಿತ್ರವನ್ನು ನೆಟ್ಟಗೆ ನಿಲ್ಲಿಸುತ್ತದೋ ಇಲ್ಲವೋ ಕಾದು ನೋಡಬೇಕು.
ಕತೆ, ಚಿತ್ರಕತೆಯನ್ನು ನಿರ್ದೇಶಕರೇ ಹೆಣೆದಿದ್ದಾರೆ. ಜೋಶುವಾ ಶ್ರೀಧರ್ ಅವರ ಸಂಗೀತ, ರೇಣುಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಸ್ ಮಂಜುನಾಥ್ ಅವರ ಸಂಭಾಷಣೆ ಹಾಗೂ ಮಾಸ್ ಮಾಧ ಅವರ ಸಾಹಸ ಚಿತ್ರಕ್ಕಿದ್ದು, ತಾರಾ ಬಳಗದಲ್ಲಿ ನೇಥಾನ್ಯ, ರಂಗಾಯಣ ರಘು, ಜೀನಲ್ ಪಾಂಡೆ, ರಮೇಶ್ ಭಟ್, ಪ್ರಮೀಳಾ ಜೋಷಾಯಿ ಮುಂತಾದವರಿದ್ದಾರೆ. (ದಟ್ಸ್ಕನ್ನಡ ಸಿನಿ ವಾರ್ತೆ)


Click it and Unblock the Notifications











