ನಮ್ಮ ಮೆಟ್ರೋ ಶಂಕರ್ ನಾಗ್ ಗೆ ಅರ್ಪಣೆಯಾಗಲಿ

ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಶಂಕರ್ ನಾಗ್, ಬೆಂಗಳೂರು ನಗರಕ್ಕೆ ಮೆಟ್ರೋ ರೈಲು, ಅಂಡರ್ ಪಾಸ್, ಫ್ಲೈ ಓವರ್ ಮುಂತಾದವುಗಳ ಅವಶ್ಯಕತೆಯಿದೆ ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲೇ ಮೆಟ್ರೋ ಸಂಚಾರಕ್ಕೆ ಸರ್ವೇ ಕೂಡ ಮಾಡಿಸಿದ್ದರಂತೆ. ತನ್ನ ಆತ್ಮೀಯರನ್ನು ದೆಹಲಿ, ಮುಂಬೈ ಮತ್ತು ಚೆನ್ನೈ ನಗರಕ್ಕೆ ಕಳುಹಿಸಿ ಮೆಟ್ರೋ ಸಂಚಾರದ ಬಗ್ಗೆ ಅಧ್ಯಯನ ಮಾಡಲು ಕಳುಹಿಸಿದ್ದರಂತೆ. ಪ್ರಚಂಡ ಯಶಸ್ಸು ಕಂಡ ತನ್ನ 'ಮಾಲ್ಗುಡಿ ಡೇಸ್' ಧಾರಾವಾಹಿಯ ಪ್ರಶಸ್ತಿ ಸ್ವೀಕರಿಸಲು ಶಂಕರ್ ನಾಗ್ ಲಂಡನ್ ನಗರಕ್ಕೆ ಹೋಗಿದ್ದಾಗ ಅಲ್ಲಿನ ಮೆಟ್ರೋ ರೈಲು ವ್ಯವಸ್ಥೆ ನೋಡಿ ಬೆಂಗಳೂರು ನಗರಕ್ಕೂ ಈ ಸೌಲಭ್ಯ ಬರಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾಗಿದ್ದರಂತೆ.
ಎಂದೂ ಸಮಯ ಪೋಲು ಮಾಡದ ಶಂಕರ್ ನಾಗ್, ಬಡವರ ಮೇಲೆ ಅತೀವ ಕಾಳಜಿ ಹೊಂದಿದ್ದರು. 1986ರಲ್ಲಿ ಯೆಲಹಂಕದಲ್ಲಿ ಒಂದು ಸಾವಿರ ಮನೆಯನ್ನು ಆಸ್ಟ್ರಿಯಾ ದೇಶದ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದರು. ಬಡವರಿಗಾಗಿ ಪ್ರತಿ 100 ಕಿಲೋಮೀಟರ್ ಗೆ ಒಂದರಂತೆ ಆಸ್ಪತ್ರೆ ಕಟ್ಟಿಸುವ ಕನಸನ್ನೂ ಶಂಕರ್ ನಾಗ್ ಕಂಡಿದ್ದರು. ಕನ್ನಡ ಚಿತ್ರರಂಗದ ಮತ್ತು ಕನ್ನಡ ನಾಡಿನ ನಿಜವಾದ 'ಕನಸುಗಾರ' ಶಂಕರ್ ನಾಗ್ ಅವರೇ ಅಲ್ಲವೆ?
ಆದರೆ ವಿಧಿ ಆಟ, ಸೆಪ್ಟೆಂಬರ್ 30,1990ರಂದು ಇಡೀ ಕರ್ನಾಟಕ ದಸರಾ ಹಬ್ಬ ಆಚರಿಸುತ್ತರಬೇಕಾದರೆ, ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ನಿಧನರಾದರೆನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಎರಡುವರೆ ದಶಕಗಳ ಹಿಂದೆ ಕನಸು ಕಂಡಿದ್ದ ನಮ್ಮ ಶಂಕರ್ ನಾಗ್ ಅವರ ಮೆಟ್ರೋ ರೈಲು ಸಂಚಾರ "ನಮ್ಮ ಮೆಟ್ರೋ" ಮೂಲಕ ಈ ದೀಪಾವಳಿ ಹಬ್ಬಕ್ಕಾದರೂ ಆರಂಭವಾಗಲಿ ಎಂದು ಆಶಿಸೋಣ. ಸಾಧ್ಯವಾದರೆ ನಮ್ಮ ಮೆಟ್ರೋವನ್ನು ಶಂಕರ್ ಗೆ ಸರಕಾರ ಅರ್ಪಿಸಲಿ.


Click it and Unblock the Notifications











