ಸೆನ್ಸಾರ್ ವಿರುದ್ಧ ಸಿಡಿದೆದ್ದ ಅಗ್ನಿ ಶ್ರೀಧರ್
'ಕಳ್ಳರ ಸಂತೆ' ಚಿತ್ರತಂಡ ಸೆನ್ಸಾರ್ ಮಂಡಳಿ ವಿರುದ್ಧ ಸಿಡಿದಿದ್ದಿದೆ. ಗಣಿ, ಲೂಟಿ, ವಿಧನಾಸೌಧ...ಮುಂತಾದ ಪದಗಳನ್ನು ಕೈಬಿಡುವಂತೆ ಸೆನ್ಸಾರ್ ಮಂಡಳಿ 'ಕಳ್ಳರ ಸಂತೆ' ಚಿತ್ರತಂಡಕ್ಕೆ ತಾಕೀತು ಮಾಡಿತ್ತು. ಸೆನ್ಸಾರ್ ಮಂಡಳಿಯ ಈ ಕ್ರಮವನ್ನು ವಿರೋಧಿಸಿ ಕಳ್ಳರ ಸಂತೆ ಚಿತ್ರತಂಡ,ಗಣಿಗಾರಿಕೆ ರಾಷ್ಟ್ರೀಕರಣ ಹೋರಾಟ ಸಮಿತಿ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಗುರುವಾರಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಪತ್ರಕರ್ತ ಹಾಗೂ ಚಿತ್ರದ ಕತೆಗಾರ ಅಗ್ನಿ ಶ್ರೀಧರ್ ಮಾತನಾಡುತ್ತಾ, 'ದೇಶಲೂಟಿ' ಎಂಬ ಪದ ಈಗಾಗಲೇ ಹಲವಾರು ಚಿತ್ರಗಳಲ್ಲಿ ಬಳಕೆಯಾಗಿದೆ. 'ಗಣಿಲೂಟಿ' ಎಂಬ ಪದವನ್ನು ಬಳಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಕನ್ನಡ ಚಿತ್ರಗಳ ವಿಷಯದಲ್ಲಿ ಸೆನ್ಸಾರ್ ಮಂಡಳಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೆನ್ಸಾರ್ ಮಂಡಳಿ ಎಚ್ಚೆತ್ತುಕೊಳ್ಳದಿದ್ದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ 'ಕಳ್ಳರ ಸಂತೆ' ಚಿತ್ರದ ನಿರ್ದೇಶಕಿ ಸುಮನಾ ಕಿತ್ತ್ತೂರು, ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕರುನಾಡ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪಟ್ಟಣಗೆರೆ ಜಯಣ್ಣ ಸೇರಿದಂತೆ ಕರ್ನಾಟಕ ಸರ್ವೋದಯ ಪಕ್ಷ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ, ಪ್ರಜಾ ವಿಮೋಚನಾ ಚಳವಳಿ ಮುಂತಾದ ಸಂಘಟನೆಗಳು ಭಾಗವಹಿಸಿದ್ದವು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











