ವಿಷ್ಣುವರ್ಧನ ಶೀರ್ಷಿಕೆಗೆ ಶಾಂತವೀರ ಸ್ವಾಮಿ ಬೆಂಬಲ
ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿರ್ಮಿಸುತ್ತಿರುವ 'ವಿಷ್ಣುವರ್ಧನ' ಶೀರ್ಷಿಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಕೊಳದ ಮಠದ ಶಾಂತವೀರ ಸ್ವಾಮೀಜಿಗಳು ದ್ವಾರಕೀಶ್ ಪರವಾಗಿ ಧ್ವನಿಎತ್ತಿದ್ದು, ದ್ವಾರಕೀಶ್ ಅವರು ಇದೇ ಶೀರ್ಷಿಕೆಯಲ್ಲಿ ಚಿತ್ರ ನಿರ್ಮಿಸಲಿ ಎಂದಿದ್ದಾರೆ.
ದ್ವಾರಕೀಶ್ ಅಭಿಮಾನಿಗಳ ಸಂಘ 'ದ್ವಾರಕೀಶ್ ಗೆಳಯರ ಗುಂಪು' ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 'ವಿಷ್ಣುವರ್ಧನ' ಶೀರ್ಷಿಕೆ ವಿವಾದಕ್ಕೆ ಶ್ರೀಗಳು ತೆರೆ ಎಳೆಯುವ ಪ್ರಯತ್ನ ಮಾಡಿದರು. 'ವಿಷ್ಣುವರ್ಧನ' ಶೀರ್ಷಿಕೆ ಯಾರೊಬ್ಬರ ಸ್ವತ್ತು ಅಲ್ಲ ಎಂದು ವಾಗ್ದಾಳಿ ಮಾಡಿದರು.
ಇದೇ ಸಂದರ್ಭದಲ್ಲಿ ದ್ವಾರಕೀಶ್ ಅವರಿಗೆ ಡಾಕ್ಟರೇಟ್ ಕೊಡಲು ಯಾವುದೇ ವಿಶ್ವವಿದ್ಯಾಲಯ ಬರದೆ ಇರುವ ಬಗ್ಗೆ ಶ್ರೀಗಳು ಖೇದ ವ್ಯಕ್ತಪಡಿಸಿದರು. 'ವಿಷ್ಣುವರ್ಧನ' ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ದ್ವಾರಕೀಶ್ ಸಹ ಧ್ವನಿಗೂಡಿಸಿದರು.
ಶೀರ್ಷಿಕೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹಾಗೆಯೇ ತಾವು ಯಾವುದೇ ವ್ಯಕ್ತಿಗೂ ಅನ್ಯಾಯ ಮಾಡುವುದಿಲ್ಲ. ಅದು ಏನೇ ಆಗಲಿ 'ವಿಷ್ಣುವರ್ಧನ' ಶೀರ್ಷಿಕೆಯಲ್ಲೇ ಚಿತ್ರ ತೆಗೆಯುತ್ತೇನೆ. ತಾತ್ಕಾಲಿಕವಾಗಿ ದ್ವಾರಕೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ 'ಪ್ರೊಡಕ್ಷನ್ ನಂಬರ್ 47' ಎಂದು ಇಡಲಾಗಿದೆ.


Click it and Unblock the Notifications











