ಉಮಾಶ್ರೀ ಸೇರಿ ಒಟ್ಟು 54ಮಂದಿಗೆ ರಾಜ್ ಪ್ರಶಸ್ತಿ
ರವಿಬೆಳಗೆರೆ, ಚನ್ನವೀರ ಕಣವಿ, ಪಾಪು, ಡಾ.ಪಂಚಾಕ್ಷರಿ ಗವಾಯಿ ಸೇರಿ 54 ಸಾಧಕರನ್ನು ಡಾ.ರಾಜ್ ಕುಮಾರ್ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಮು.ರಮೇಶ್ ಶನಿವಾರ ಮಾತನಾಡುತ್ತಾ, ಧಾರ್ಮಿಕ ಕ್ಷೇತ್ರದಿಂದ ಹಿರೇಮಗಳೂರು ಕಣ್ಣನ್, ಸಾಹಿತ್ಯ ಕ್ಷೇತ್ರದಿಂದ ಚನ್ನವೀರ ಕಣವಿ, ಶಂಕರನಾರಾಯಣ, ಹಂಪ ನಾಗರಾಜಯ್ಯ, ಚಲನಚಿತ್ರ ಕ್ಷೇತ್ರದಿಂದ ಸಿ ವಿ ಶಿವಶಂಕರ್, ದ್ವಾರಕೀಶ್, ಆರ್ ಎನ್ ಸುದರ್ಶನ್ ಹಾಗೂ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರ ನೀಡಿದರು.
ಕನ್ನಡ ಹೋರಾಟಕ್ಕಾಗಿ ಪಾಟೀಲ ಪುಟ್ಟಪ್ಪ, ರಂಗಭೂಮಿ ಏಣಗಿ ಬಾಳಪ್ಪ, ಡಾ ಬಿವಿ ರಾಜಾರಾಂ, ಸಂಗೀತ ಡಾ.ಪಂಚಾಕ್ಷರಿ ಗವಾಯಿ, ಮಾಧ್ಯಮ ರವಿ ಬೆಳೆಗರೆ, ಸಮಾಜ ಸೇವೆ ಮಾಜಿ ಸಚಿವ ಶ್ರೀರಂಗದೇವರಾಯಲು, ಭವರಲಾಲ್ ನಹರ್, ಪದ್ಮಾವತಿ ಯಾದವ್, ತೇಜಸ್ವಿನಿ ಅನಂತಕುಮಾರ್, ವೈದ್ಯಕೀಯ ಡಾ.ಪ್ರಭಾಕರ ಕೋರೆ, ಕಾನೂನು ಬಿ ಡಿ ಹಿರೇಮಠ, ಶಿಕ್ಷಣ ಟಿ ಆರ್ ಸುಬ್ರಹ್ಮಣ್ಯ ಸೇರಿದಂತೆ 54 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಶ್ರೀಕೃಷ್ಣದೇವರಾಯ ಪಟ್ಟಾಧಿಕಾರದ 500ನೇ ವರ್ಷಾಚರಣೆ ನಿಮಿತ್ತ ಹೊಸಪೇಟೆ ಕಲಾಮಂದಿರಲ್ಲಿ ಡಿ.25ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಮೇಶ್ ಮಾಹಿತಿ ನೀಡಿದರು. ಡಿ.23ರಂದು ನೇತ್ರದಾನ ನೋಂದಣಿ ಶಿಬಿರ, ವಿಜಯನಗರ ಸಾಮ್ರಾಜ್ಯದ ಕುರಿತು ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ ನಡೆಯಲಿದೆ ಎಂದು ಅವರು ವಿವರ ನೀಡಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











