ನೂತನ ಅಕಾಡೆಮಿ ಅಧ್ಯಕ್ಷೆ ತಾರಾ ಅವರ ಸಂದರ್ಶನ
ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಕರ್ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟಿ.ಎಸ್.ನಾಗಾಭರಣ ಅವಧಿ ಮುಗಿದ ನಂತರ ಆ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಸಂದರ್ಭದಲ್ಲಿ ನಟಿ ನಟಿ ತಾರಾ ಅವರ ಜೊತೆಗೆ ದಟ್ಸ್ ಕನ್ನಡ ನಡೆಸಿದ ಚಿಟ್ ಚಾಟ್ನಲ್ಲಿ ಪ್ರಪ್ರಥಮ ಬಾರಿಗೆ ಈ ರೀತಿ ಖುಷಿ ಹಂಚಿಕೊಂಡಿದ್ದಾರೆ!
1. ತಾರಾ ಅವರೇ ಈ ಮಟ್ಟದ ದೊಡ್ಡ ಜವಾಬ್ದಾರಿ ಹೊರುತ್ತಿದ್ದೀರಿ? ಏನೆನ್ನಿಸುತ್ತಿದೆ?
ಖಂಡಿತ ಖುಷಿಯಾಗುತ್ತಿದೆ. ನನ್ನ ವಲಯದ ಜವಾಬ್ದಾರಿಯನ್ನೇ ನನಗೆ ಕೊಟ್ಟು, ಚಲನಚಿತ್ರ ಅಕಾಡೆಮಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಇನ್ನೊಂದು ರೀತಿಯಲ್ಲಿ ಹೆಮ್ಮೆ ಎನಿಸುತ್ತಿದೆ.
2. ಎಷ್ಟು ವರ್ಷದ ವರೆಗೆ ನಿಮ್ಮ ಕಾರ್ಯವೈಖರಿ ಇರುತ್ತದೆ?
ಇನ್ನು ಮೂರು ವರ್ಷ ನಾನು ಅಧ್ಯಕ್ಷಸ್ಥಾನದಲ್ಲಿ ಇರುತ್ತೇನೆ. ಈ ಹಿಂದೆ ಟಿ.ಎಸ್.ನಾಗಾಭರಣ ಅವರು ಯಾವ ಮಟ್ಟದಲ್ಲಿ ಬೆಳ್ಳಿ ಹೆಜ್ಜೆ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋದರೋ ಅದೇ ಗುಣಮಟ್ಟದ ಕೆಲಸ ಮಾಡುವ ಬಗ್ಗೆ ತಯಾರಿ ನಡೆಸಿದ್ದೇನೆ.
3. ಸಿನಿಮಾರಂಗದಲ್ಲೂ ಮುಂದುವರಿಯುತ್ತೀರಲ್ವಾ?
ಹೂ ಮತ್ತೆ? ಅದು ನನ್ನನ್ನು ಇಂದು ಈ ಮಟ್ಟದಲ್ಲಿ ಗುರುತಿಸಿ, ದೊಡ್ಡ ಮಟ್ಟದ ಜವಾಬ್ದಾರಿ ಹೊರಲು ಪ್ರೇರಣೆ ಮತ್ತು ಪುಷ್ಠಿ ನೀಡಿದೆ. ಹೆಚ್ಚಿನ ಸಮಯವನ್ನು ಅಕಾಡೆಮಿ ಕೆಲಸದಲ್ಲಿ ತೊಡಗಿ, ಬಿಡುವಿದ್ದಾಗ ಚಿತ್ರಗಳಲ್ಲಿ ಮುಂದುವರೆಯುತ್ತೇನೆ.
4. ನಿಮ್ಮ ನಡುವೆ ಬೇರೆ ಒಂದಷ್ಟು ಮಂದಿ ಕಾಂಪಿಟೇಟರ್ಸ್ ಇದ್ದರು? ಆದರೂ ಜಯ ದ ಮಾಲೆ ನಿಮ್ಮದಾಗಿದ್ದು ಹೇಗೆ?
ನಾನು ಪಕ್ಷಕ್ಕೋಸ್ಕರ ನಿಷ್ಠೆಯಿಂದ ದುಡಿಯುತ್ತಾ ಬಂದಿದ್ದೇನೆ. ಯಾವುದೇ ಅಪೇಕ್ಷೆ ಇಲ್ಲದೇ ನನ್ನ ಕೈಲಾದ ಮಟ್ಟಕ್ಕೆ ಸೇವೆ ಸಲ್ಲಿಸಿದ್ದೇನೆ. ನನ್ನ ಮೇಲೆ ನಂಬಿಕೆ-ವಿಶ್ವಾಸ ಇಟ್ಟು ನನಗೆ ಈ ಮಟ್ಟದ ಗುರುತರ ಜವಾಬ್ದಾರಿ ಕೊಟ್ಟಿರುವ ಬಿಜೆಪಿ ಸರಕಾರಕ್ಕೆ ನಾನು ಕೊನೆತನಕ ಆಭಾರಿಯಾಗಿರುತ್ತೇನೆ.
5. ನಿಮ್ಮ ಪತಿ ವೇಣು (ಹೆಸರಾಂತ ಛಾಯಾಗ್ರಾಹಕ)ಅವರು ಈ ಸುದ್ದಿಗೆ ಹೇಗೆ ಪ್ರತಿಕ್ರಿಯೆ ನೀಡಿದರು?
ನನ್ನ ಜೀವನಸಂಗಾತಿಯಾಗಿ, ನನ್ನ ಬದುಕಿನ ಪ್ರತೀ ಕ್ಷಣದಲ್ಲೂ ಜೊತೆಗಿದ್ದು ನನ್ನ ಎಲ್ಲಾ ಸಕ್ಸಸ್ ಹಿಂದೆ ಇರುವ ಅವರೇ ನನ್ನ ಈ ಎಲ್ಲಾ ಸಾಧನೆಗಳಿಗೂ ಮೈಲಿಗಲ್ಲು. ಅವರ ಸಲಹೆ-ಸಹಕಾರ ಮಾರ್ಗದರ್ಶನದಲ್ಲಿ ಮುಂದಿನ ಹೆಜ್ಜೆ ಇಡುತ್ತೇನೆ ಮತ್ತು ಚಿತ್ರೋದ್ಯಮಕ್ಕೆ ಸಹಾಯವಾಗುವ ರೀತಿಯಲ್ಲಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಂಡು, ಸರಕಾರದ ಜೊತೆ ಕೈಜೋಡಿಸಿ, ಒಂದಷ್ಟು ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹಗಲು ರಾತ್ರಿ ಶ್ರಮಿಸುತ್ತೇನೆ.


Click it and Unblock the Notifications











