ಮಲ್ಲೇಶ್ವರಂ '18ನೇ ಕ್ರಾಸ್'ನಲ್ಲಿ ರಾಧಿಕಾ ಪಂಡಿತ್ ರೌಂಡ್!
ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಅಂತೂ ಇಂತೂ ಮುಗಿದು, ಬರೋಬ್ಬರಿ ಏಳು ವರ್ಷಗಳ ನಂತರ ತೆರೆಗೆ ಬರುತ್ತಿದೆ '18ನೇ ಕ್ರಾಸ್' ಎಂಬ ಚಿತ್ರ. ಶಿಷ್ಯ ಖ್ಯಾತಿಯ ದೀಪಕ್ ಹಾಗೂ ಹ್ಯಾಟ್ರಿಕ್ ನಟಿ ರಾಧಿಕಾ ಪಂಡಿತ್ ಜೋಡಿಯ ಈ ಚಿತ್ರದ ನಿರ್ದೇಶಕರು ಶಂಕರ್. ಮೊಗ್ಗಿನ ಮನಸ್ಸು ಚಿತ್ರಕ್ಕಿಂತ ಮೊದಲು ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ನಟಿಸಿದ್ದರು. ಆಗಿನ್ನೂ ರಾಧಿಕಾ ಧಾರಾವಾಹಿ ನಟಿ.
ಶಿಷ್ಯ ಚಿತ್ರವನ್ನು ಮುಗಿಸಿ ಕುಳಿತಿದ್ದ ದೀಪಕ್ ಹಾಗೂ ಸೀರಿಯಲ್ ನಟಿಯಾಗಿದ್ದ ರಾಧಿಕಾ ಪಂಡಿತ್ ಅವರನ್ನು ನಾಯಕ-ನಾಯಕಿಯನ್ನಾಗಿಸಿ 2006ರಲ್ಲಿ ನಿರ್ಮಾಪಕ ಚಿಕ್ಕಣ್ಣ ಈ 18ನೇ ಕ್ರಾಸ್ ಚಿತ್ರವನ್ನು ಪ್ರಾರಂಭಿಸಿದರು. ಈ ಚಿತ್ರದ ಚಿತ್ರೀಕರಣ ಆರಂಭದಿಂದಲೂ ಕುಂಟುತ್ತಾ ಸಾಗಿತ್ತು ದುರದೃಷ್ಟವಶಾತ್ ಚಿತ್ರೀಕರಣದ ನಡೆಯುತ್ತಿದ್ದ ಹಂತದಲ್ಲೇ ಚಿತ್ರದ ನಿರ್ಮಾಪಕ ಚಿಕ್ಕಣ್ಣ ತೀರಿಕೊಂಡುಬಿಟ್ಟರು.
ಚಿಕ್ಕಣ್ಣ ತೀರಿಕೊಂಡ ಬಳಿಕ ಪ್ರೊಜೆಕ್ಟ್ ನಿಂತು ಹೋಗಿತ್ತು. ನಂತರ ಚಿಕ್ಕಣ್ಣರ ಪತ್ನಿ ರತ್ನಾ ಜವಾಬ್ದಾರಿ ವಹಿಸಿಕೊಂಡು ಒಂದೆರಡು ವರ್ಷಗಳ ನಂತರ ಚಿತ್ರೀಕರಣ ಮುಗಿಸಿದರು. ಚಿತ್ರದ ಬಿಡುಗಡೆಗೆ ಕಳೆದೆರಡು ವರ್ಷಗಳಿಂದ ಪ್ರಯತ್ನಿಸಿದರಾದರೂ ಸಾಧ್ಯವಾಗಿರಲಿಲ್ಲ. ಇದೀಗ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಬರುವ ಶುಕ್ರವಾರ, ಅಂದರೆ ಆಗಸ್ಟ್ 3, 2012 ರಂದು '18ನೇ ಕ್ರಾಸ್' ತೆರೆಗೆ ಬರಲಿದೆ.
ಇದೀಗ, ದಿವಂಗತ ಚಿಕ್ಕಣ್ಣ ಅವರ ಕೊನೆಯ ಮಗ ಹಾಗೂ ವಿತರಕ ಜಯಣ್ಣ '18ನೇ ಕ್ರಾಸ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. "ಈ ಚಿತ್ರ ಬಿಡುಗಡೆಯಾದರೆ ಆ ಕುಟುಂಬಕ್ಕೆ ಸಹಾಯವಾಗುತ್ತದೆ. ಬಿಡುಗಡೆ ವಿಷಯ ತಿಳಿದು ತುಂಬಾ ಸಂತೋಷವಾಯ್ತು" ಎಂದು ಹೇಳಿ ರಾಧಿಕಾ ಪಂಡಿತ್ ಶುಭ ಹಾರೈಸಿದ್ದಾರೆ.
ಶಂಕರ್ ನಿರ್ದೇಶನದ 18ನೇ ಕ್ರಾಸ್ ಗೆ ಅರ್ಜುನ್ ಜನ್ಯ ಸಂಗೀತದ ಸಾಥ್ ಇದೆ. ಬಿ.ಎಲ್. ಬಾಬು ಹಾಗೂ ಪಿ.ಎಲ್. ರವಿ, ಈ ಇಬ್ಬರು ಕ್ರಮವಾಗಿ ಮೊದಲಾರ್ಧ ಹಾಗೂ ದ್ವಿತೀಯಾರ್ಧಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಅಭಿನಯಿಸಿದ್ದಾರೆ. ಸದ್ಯಕ್ಕೆ ಚಿತ್ರ ಬಿಡುಗಡೆಯಾಗುತ್ತಿರುವ ಸಂತೋಷವನ್ನು ಚಿತ್ರತಂಡ ಅನುಭವಿಸುತ್ತಿದೆ. ಪ್ರೇಕ್ಷಕರು ಇಷ್ಟಪಟ್ಟರೆ ಯಶಸ್ಸೂ ಖಂಡಿತ. (ಒನ್ ಇಂಡಿಯಾ ಕನ್ನಡ)


Click it and Unblock the Notifications











