ಕನ್ನಡ ಪತ್ರಿಕೆ ಮಾರುತ್ತಿದ್ದ ಹುಡುಗ ಈಗ ತಮಿಳು ನಕ್ಷತ್ರ

ಬೆಂಗಳೂರಿನಲ್ಲಿ ನಡೆದ ಸಿಸಿಎಲ್ ಪಂದ್ಯಾವಳಿಯ ವೇಳೆ ಮಾತನಾಡುತ್ತಿದ್ದ ಶರತ್ ಕುಮಾರ್ ತನ್ನ ಹಿಂದಿನ ಜೀವನವನ್ನು ಮೆಲುಕು ಹಾಕಿದರು. ಅಲಸೂರಿನಲ್ಲಿ ಪೇಪರ್ ಹಾಕುತ್ತಿದ್ದೆ, ಬೆಂಗಳೂರು ನನಗೆ ಚಿರಪರಿಚಿತ. ನನ್ನ ಅಚ್ಚುಮೆಚ್ಚಿನ ನಗರ ಕೂಡಾ. ನನಗೆ ಇಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೂಡಾ ನನಗೆ ಬಹಳಷ್ಟು ಆತ್ಮೀಯರಿದ್ದಾರೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಾನು ತಮಿಳು ಬಿಟ್ಟು ತೆಲುಗು ಚಿತ್ರದಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಆರು ಚಿತ್ರದಲ್ಲಿ ನಟಿಸಿದ್ದೇನೆ. ನಾನು ನಟಿಸಿದ ಸಾರಥಿ ಚಿತ್ರ ಭರ್ಜರಿಯಾಗಿ ಗೆದಿದ್ದು ಸಂತೋಷವಾಗಿದೆ. ದರ್ಶನ್ ಮತ್ತು ದಿನಕರ್ ಪಕ್ಕಾ ವೃತ್ತಿಪರ ಕೆಲಸಗಾರರು. ಆ ಇಬ್ಬರು ಹುಡುಗರ ಮೇಲೆ ನನಗೆ ಹೆಮ್ಮೆಯಿದೆ ಎಂದು ಪಟಪಟನೆ ಕನ್ನಡದಲ್ಲಿ ಮಾತನಾಡಿದ್ದಾರೆ.
ಜುಲೈ 14, 1954 ರಲ್ಲಿ ನವದೆಹಲಿಯಲ್ಲಿ ಜನಿಸಿದ ಶರತ್ ಕುಮಾರ್ ತನ್ನ 22-23ನೇ ವಯಸಿನಲ್ಲಿ ಬೆಂಗಳೂರಿನಲ್ಲಿ ಈ ವೃತ್ತಿಯಲ್ಲಿ ತೊಡಗಿದ್ದರು. ಮೂಲತಃ ತಮಿಳುನಾಡು ಶಿವಗಂಗಾ ಜಿಲ್ಲೆಯವರಾದ ಶರತ್ ಕುಮಾರ್ ಒಬ್ಬ ನಟ, ರಾಜಕಾರಿಣಿ ಮತ್ತು ಜರ್ನಲಿಸ್ಟ್. ಶರತ್ ಕುಮಾರ್ ಕನ್ನಡದಲ್ಲಿ ಇದುವರೆಗೆ ನಟಿಸಿದ ಏಕೈಕ ಚಿತ್ರ ಸಾರಥಿ ಮೂಲಕ ಕರ್ನಾಟಕದಲ್ಲೂ ಮನೆಮಾತಾಗಿದ್ದಾರೆ.
ತಮಿಳಿನಲ್ಲಿ ಖಳನಟನಾಗಿ, ಸೆಕೆಂಡ್ ಹೀರೋ ಆಗಿ ಸಿನಿಮಾ ವೃತ್ತಿ ಜೀವನ ಆರಂಭಿಸಿದ ಶರತ್ ಕುಮಾರ್ ನಂತರ ಹೀರೋ ಆಗಿ ತಮಿಳುನಾಡಿನಾದ್ಯಂತ ಚಿರಪರಿಚಿತರಾದರು. ಕಾವೇರಿ ಚಳುವಳಿ ಕಾವೇರಿದ್ದಾಗ ಕರ್ನಾಟಕದ ವಿರುದ್ದ ಭಯಂಕರವಾಗಿ ಆರ್ಭಟಿಸಿದ್ದ ಶರತ್ ಕುಮಾರ್ ದಕ್ಷಿಣ ಭಾರತ ಕಲಾವಿದರ ಸಂಘದ ಅಧ್ಯಕ್ಷರು ಕೂಡಾ.


Click it and Unblock the Notifications











