ಸುದೀಪ್ ರನ್ನು ಬಚ್ಚನ್ ಮಾಡಲಿರುವ ಶಶಾಂಕ್
ಕಿಚ್ಚ ಸುದೀಪ್ 'ಬಚ್ಚನ್' ಆಗಲಿದ್ದಾರೆಯೇ? ಹೀಗೊಂದು ಪ್ರಶ್ನೆಗೆ ಉತ್ತರ 'ಹೌದು' ಎಂಬುದು ಸದ್ಯದ ಸಮಾಚಾರ. ಜರಾಸಂಧ ನಿರ್ದೇಶಿಸಿ ಹೆಸರು ಕೆಡಿಸಿಕೊಂಡ ನಿರ್ದೇಶಕ ಶಶಾಂಕ್, ಇದೀಗ 'ಬಚ್ಚನ್' ಟೈಟಲ್ ಇಟ್ಟುಕೊಂಡು ಕಥೆ ಹೆಣೆಯುತ್ತಿದ್ದಾರೆ. ಅದು ಸುದೀಪ್ ಗಾಗಿಯೇ ಸಿದ್ಧವಾಗುತ್ತಿದೆ ಎಂಬುದು ಗಾಂಧಿನಗರದ ಮಂದಿಯ ಮೆಸೇಜು.
ಶಶಾಂಕ್ ನಿರ್ದೇಶನದ 'ಜರಾಸಂಧ' ಕಷ್ಟಪಟ್ಟು ಐವತ್ತು ದಿನ ಪೂರೈಸಿದೆ. ಸ್ವತಃ ಶಶಾಂಕ್ ಹಾಗೂ ಸಿನಿಪ್ರೇಕ್ಷಕರು ಅಂದುಕೊಂಡಷ್ಟು ಸಿನಿಮಾ ಯಶಸ್ವಿಯಾಗಿಲ್ಲ. 'ಕರಿಚಿರತೆ' ವಿಜಯ್ ಎಷ್ಟೇ ಕಷ್ಟಪಟ್ಟರೂ ಅದೆಲ್ಲಾ ನೀರಿನಲ್ಲಿ ಮಾಡಿದ ಹೋಮವಾಗಿದೆ. ಆದರೆ ಶಶಾಂಕ್ ಸುಮ್ಮನೆ ಕುಳಿತಿಲ್ಲ, ಮುಂದಿನ ಚಿತ್ರಕ್ಕೆ ಸಿದ್ಧರಾಗಿದ್ದಾರೆ.
ಅಂದುಕೊಂಡಂತೆ ಎಲ್ಲವೂ ನಡೆದರೆ ಬಚ್ಚನ್ ಚಿತ್ರದ ಹೀರೋ ಸುದೀಪ್ ಆಗಲಿದ್ದಾರೆ. ನಾಯಕಿ, ಹಾಗೂ ಮಿಕ್ಕವರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಫೆಬ್ರವರಿ ಕೊನೆಯ ವಾರ ಚಿತ್ರಕ್ಕೆ ಮುಹೂರ್ತ ನಡೆಸಲು ನಿರ್ಧರಿಸಲಾಗಿದೆ. ಜರಾಸಂಧ ಮೂಲಕ ಹೋದ ಶಶಾಂಕ್ ಮಾನ, ಬಚ್ಚನ್ ಕಡೆಯಿಂದ ಬರಬಹುದೇ ಎಂಬುದು ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











