ಪರಂವಃ ಸ್ಟುಡಿಯೋಸ್ 'ಪಾರ್ಟಿ'ಲಿ ರಿಷಬ್: 'ಇಬ್ಬನಿ ತಬ್ಬಿದ ಇಳೆಯಲಿ' ಮುಹೂರ್ತ
ಕೊರೊನಾ ಹಾವಳಿ ಕಮ್ಮಿ ಆದಮೇಲೆ ಸಾಲು ಸಾಲು ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ನಿರ್ಮಾಣವಾಗುತ್ತಿದೆ. ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋ ಬ್ಯಾನರ್ನಲ್ಲಿ ಒಟ್ಟೊಟ್ಟಿಗೆ 2 ಸಿನಿಮಾಗಳ ಮುಹೂರ್ತ ಇಂದು (ಸೆಪ್ಟೆಂಬರ್ 1) ನೆರವೇರಿದೆ. ಈಗಾಗಲೇ ಘೋಷಣೆಯಾಗಿದ್ದ 'ಇಬ್ಬನಿ ತಬ್ಬಿದ ಇಳೆಯಲಿ' ಜೊತೆಗೆ 'ಬ್ಯಾಚುಲರ್ ಪಾರ್ಟಿ' ಅನ್ನುವ ಮತ್ತೊಂದು ಸಿನಿಮಾ ಸೆಟ್ಟೇರಿದೆ.
'777 ಚಾರ್ಲಿ' ಸಿನಿಮಾ ನಿರ್ಮಿಸಿ, ನಟಿಸಿ ಸೂಪರ್ ಸಕ್ಸಸ್ ಕಂಡಿರುವ ರಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಜೊತೆಗೆ ತಮ್ಮದೇ ನಿರ್ದೇಶನದ ಚಿತ್ರಕ್ಕೂ ಕಥೆ ಬರೆಯುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ತಂಡ ಕಟ್ಟಿಕೊಂಡು ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಬಳಗದಲ್ಲಿದ್ದ ಪ್ರತಿಭೆಗಳಿಗೆ ಸಿನಿಮಾ ನಿರ್ದೇಶನದ ಅವಕಾಶ ಮಾಡಿಕೊಡುತ್ತಿದ್ದಾರೆ. ಸಿಂಪಲ್ ಸ್ಟಾರ್ ಕ್ಯಾಂಪ್ನಲ್ಲಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಹಾಗೂ ಅಭಿಜಿತ್ ಮಹೇಶ್ ಈಗ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಬನಶಂಕರಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ 'ಬ್ಯಾಚುಲರ್ ಪಾರ್ಟಿ' ಸಿನಿಮಾಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಒಂದು ರೊಮ್ಯಾಂಟಿಕ್ ಪ್ರೇಮ್ ಕಹಾನಿ ಜೊತೆಗೆ ಒಂದು ಫನ್ ಎಂಟರ್ಟೈನರ್ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಅಭಿಜಿತ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ದೂದ್ ಪೇಡಾ ದಿಗಂತ್ ಮತ್ತು ರಿಷಬ್ ಶೆಟ್ಟಿ ನಟಿಸುತ್ತಿರುವುದು ವಿಶೇಷ.

ಚಂದ್ರಜಿತ್ ಸಾರಥ್ಯದ ಪ್ರೇಮ್ ಕಹಾನಿ
ರಕ್ಷಿತ್ ಶೆಟ್ಟಿ ಅವರ ಸೆವೆನ್ ಒಡ್ಸ್ ತಂಡದಲ್ಲಿ ಗುರ್ತಿಸಿಕೊಂಡು 'ಕಿರಿಕ್ ಪಾರ್ಟಿ' ಮತ್ತು 'ಅವನೇ ಶ್ರೀಮನ್ನಾರಾಯಣ' ಚಿತ್ರಗಳಿಗೆ ಕೆಲಸ ಮಾಡಿದ್ದ ಚಂದ್ರಜಿತ್ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ಮಾಣದ 'ಕಥಾಸಂಗಮ' ಚಿತ್ರದ 'ರೇನ್ಬೋ ಲ್ಯಾಂಡ್' ಕಥೆಯನ್ನು ಕಟ್ಟಿಕೊಟ್ಟಿದ್ದು ಕೂಡ ಇದೇ ಚಂದ್ರಜಿತ್. ವಿಹಾನ್ ಮತ್ತು ಅಂಕಿತಾ ಅಮರ್ ಚಿತ್ರದ ನಾಯಕ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಕಲರ್ಫುಲ್ ಮೋಷನ್ ಪೋಸ್ಟರ್ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು.

ರಿಷಬ್, ದಿಗ್ಗಿ, ಅಚ್ಯುತ್ 'ಬ್ಯಾಚುಲರ್ ಪಾರ್ಟಿ'
ಅಭಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಚಿತ್ರದ ಲೀಡ್ ರೋಲ್ಗಳಲ್ಲಿ ದಿಗಂತ್, ರಿಷಬ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಕಥೆ ಬ್ಯಾಂಕಾಕ್ನಲ್ಲಿ ನಡೆದರೆ ಹೇಗಿರುತ್ತೋ ಅಂತಾದೊಂದು ಕಥೆ ಇಲ್ಲಿದೆ. ತಮ್ಮ ತಂಡದಲ್ಲಿ ಕಾಮಿಡಿ ಪಂಚ್ಗಳನ್ನು ಹೆಚ್ಚು ಬರೆಯುವುದು ಅಭಿಜಿತ್. ಇದೀಗ ಅವರೇ ನಿರ್ದೇಶನ ಮಾಡುತ್ತಿರುವ ಸಿನಿಮಾ ಅಂದಮೇಲೆ ಇಡೀ ಸಿನಿಮಾ ಎಷ್ಟು ಮಜವಾಗಿರುತ್ತೆ ಊಹಿಸಿ ಎಂದಿದ್ದಾರೆ.

ಪರಂವಃ ಸ್ಟುಡಿಯೋದಲ್ಲಿ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿನ ಹಾಗೂ ರಕ್ಷಿತ್ ಶೆಟ್ಟಿ ಬಹಳ ವರ್ಷಗಳಿಂದ ಆತ್ಮೀಯ ಸ್ನೇಹಿತರು. ಆದರೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸಂಸ್ಥೆಯಲ್ಲಿ ಮೊದಲ ಬಾರಿಗೆ ರಿಷಬ್ ನಟಿಸುತ್ತಿದ್ದಾರೆ. "ಇನ್ನು ಸಂಭಾವನೆ ಮಾತನಾಡಿಲ್ಲ. ಹೇಗಿದ್ದರೂ ಅದು ನನ್ನ ಸಂಸ್ಥೆನೇ, ರಕ್ಷಿತ್ ಶೆಟ್ಟಿ ಅಕೌಂಟ್ಗೆ ಹಣ ಬಂದರೆ ನನ್ನ ಅಕೌಂಟ್ಗೆ ಬಂದಂತೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

2 ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್
ಇತ್ತೀಚೆಗೆ ಕನ್ನಡದಲ್ಲೂ ನೇರವಾಗಿ ಓಟಿಟಿ ರಿಲೀಸ್ಗೆ ಸಿನಿಮಾಗಳು ನಿರ್ಮಾಣ ಆಗ್ತಿದೆ. 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ 'ಬ್ಯಾಚುಲರ್ ಪಾರ್ಟಿ' ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್ ಆಗುತ್ತಾ ಎನ್ನುವ ಪ್ರಶ್ನೆಗೆ ರಕ್ಷಿತ್ ಶೆಟ್ಟಿ "ಸಕುಟುಂಬ ಸಮೇತ ಸಿನಿಮಾ ನಾವು ಓಟಿಟಿಗೆ ಎಂದು ಮಾಡಿದ್ದು. ಆದರೆ ಕೆಲ ಮಲ್ಟಿಪ್ಲೆಕ್ಸ್ಗಳಲ್ಲಿ ಮಾಡಿದ್ದೆವು. 'ಸ್ಟ್ರಾಬೆರಿ' ಓಟಿಟಿಗಾಗಿ ಮಾಡುತ್ತಿದ್ದೇವೆ. ಆದರೆ ಈ ಎರಡೂ ಸಿನಿಮಾಗಳನ್ನು ಥಿಯೇಟರ್ಗಳಲ್ಲಿ ರಿಲೀಸ್ ಮಾಡಲು ನಿರ್ಮಾಣ ಮಾಡುತ್ತಿದ್ದೇವೆ" ಎಂದಿದ್ದಾರೆ.


Click it and Unblock the Notifications











