ವಿಷ್ಣುವರ್ಧನ್ ರನ್ನು ಮತ್ತೆ ಬಡಿದೆಬ್ಬಿಸಿದ ಸುದೀಪ್, ದ್ವಾರಕೀಶ್

2011 ರಲ್ಲಿ ಪ್ರಜ್ವಲಿಸಿದ ಮೂರು ನಕ್ಷತ್ರಗಳು: ಸುದೀಪ್
ವಿಷ್ಣುವರ್ಧನ್ ಸಾವಿನ ನಂತರ ಅವರ ಅಭಿಮಾನಿಗಳು ಹಾಗೂ ಚಿತ್ರರಂಗವಿನ್ನೂ ಚೇತರಿಸಿಕೊಂಡಿರಲಿಲ್ಲ. ಆ ವೇಳೆಯಲ್ಲಿ ನಟ ನಿರ್ಮಾಪಕ ಹಾಗೂ ಒಂದಾನೊಂದು ಕಾಲದಲ್ಲಿ ವಿಷ್ಣುವರ್ಧನ್ ಗೆ ಆಪ್ತಮಿತ್ರನಾಗಿದ್ದು ಇನ್ನೊಂದು ಕಾಲದಲ್ಲಿ ಶತ್ರು ಸ್ಥಾನದಲ್ಲಿ ನಿಂತು, ಮತ್ತೆ ಆಗಾಗ ಜಾಗ ಬದಲಿಸುತ್ತಿದ್ದ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ವಿಷ್ಣುವರ್ಧನ್ ಹೆಸರಿನಲ್ಲಿ ಚಿತ್ರ ಮಾಡುವುದಾಗಿ ಘೋಷಿಸಿ ವಿವಾದದ ಹುಟ್ಟಿಗೆ ಕಾರಣರಾದರು.
ಅದೇ ವೇಳೆಗೆ ಆ ಚಿತ್ರಕ್ಕೆ ನಾಯಕ ನಟರಾಗಿದ್ದ ಸುದೀಪ್ ದ್ವಾರ್ಕಿಗೆ ಸಪೋರ್ಟ್ ಮಾಡುವ ಮೂಲಕ ವಿಷ್ಣು ಅಭಿಮಾನಿಗಳ ಬೆಂಕಿಗೆ ತುಪ್ಪ ಹಾಕಿದ್ದು ವಿಷ್ಣು ಪತ್ನಿ ಭಾರತಿ ಕೆರಳುವಂತಾಯ್ತು. ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು, ಅಭಿಮಾನಿಗಳ ಬಳಿ ದುಮ್ಮಾನ ಕಳಿಸಿದ ಭಾರತಿ ಅಗಲಿದ ವಿಷ್ಣು ಹೆಸರಿಗೆ ಮಸಿ ಬಳಿಯದಂತೆ ಕೋರ್ಟ್ ಮೆಟ್ಟಿಲನ್ನೇರಬೇಕಾಯ್ತು.
ಈ ಎಲ್ಲಾ ಬೆಳವಣಿಗೆಯಿಂದ ಅನಾವಶ್ಯಕ ಕಿರಿಕಿರಿ, ಗೊಂದಲ, ವಿವಾದಗಳ ಮೂಲಕ ಚಿತ್ರರಂಗ ಚಿತ್ರಾನ್ನವಾಗಿದೆ ಎಂಬ ಪ್ರದರ್ಶನ ಆಗಿದ್ದು ಸಿನಿಪ್ರೇಕ್ಷಕರ ಕೋಪ ತರಿಸಿತ್ತು. ನಂತರ ದ್ವಾರಕೀಶ್ 'ವಿಷ್ಣುವರ್ಧನ' ಎಂಬ ಚಿತ್ರ ಮಾಡಿ ಅದನ್ನು ಪ್ರೇಕ್ಷಕರ ಮುಂದಿಟ್ಟು ಈಗ ಯಶಸ್ಸಿನ ನಗೆ ಬೀರುತ್ತಿದ್ದಾರೆ, ಸುದೀಪ್ ಮೀಸೆಯಡಿಯಲ್ಲೇ ನಗುತ್ತಿದ್ದಾರೆ. ಅಗಲಿದ ಡಾ. ವಿಷ್ಣುವರ್ಧನ್ ಬಗ್ಗೆ ಯಾವುದೇ ಅವಹೇಳನ ಚಿತ್ರದಲ್ಲಿ ಇಲ್ಲವಾದ್ದರಿಂದ ಈಗ ಮೇಲ್ನೋಟಕ್ಕೆ ಎಲ್ಲವೂ ಸುಖಾಂತ್ಯ.
ಈ ಎಲ್ಲಾ ಬೆಳವಣಿಗೆಗಳು ಕುಟುಂಬದಂತಿರಬೇಕಾದ ಚಿತ್ರರಂಗದಲ್ಲಿ ಬೇಕಾ? ಮೈಕ್ ಎತ್ತಿದರೆ ಕಲಾಸೇವೆ ಎನ್ನುವ ಸಿನಿಮಾಮಂದಿ ಮಾಡುವುದೆಲ್ಲಾ ಬಿಸಿನಸ್ಸೇ. ಸಿನಿಮಾ ಮಾಡುವುದೇನೋ ಸರಿ, ಹೆಸರಿಡುವುದಕ್ಕೂ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಆಪ್ತಮಿತ್ರರ ಹೆಸರಿನಲ್ಲಿ ಯಾರಾದರೂ ಸಿನಿಮಾ ಮಾಡಬಹುದು ಕೂಡ. ಆದರೆ ಗೆಳೆತನದ ಮಧ್ಯೆ ಗೊಸುಂಬೆ ಬಿಟ್ಟುಕೊಳ್ಳುವುದೇಕೆ ಎಂಬ ಪ್ರಶ್ನೆಯನ್ನು ದ್ವಾರಕೀಶ್ ಗೆ ಜನ ಹಿಂದಿನಿಂದ ಕೇಳುತ್ತಿದ್ದಾರೆ.
ಯಶಸ್ಸು ಮಾತ್ರ ನಮ್ಮ ಮಂತ್ರ ಅನ್ನುವ ದ್ವಾರಕೀಶ್, ಸುದೀಪ್ ಹಾಗೂ ಭಾವನೆಯೇ ಜೀವನ ಎನ್ನುವಂತಿರುವ ಭಾರತಿ ಇಬ್ಬರೂ ಕಲಾಸೇವೆ, ಲಾಭ, ನಷ್ಟಗಳ ಸರಿಯಾದ ಲೆಕ್ಕಾಚಾರ ಕಲಿತುಕೊಳ್ಳಬೇಕಾಗಿದೆ. ಕಲಿಸಲು ಗುರುವನ್ನು ಹುಡುಕುವ ಬದಲು ತಮ್ಮ ಅನುಭವ ಹಾಗೂ ಸಮಾಜವನ್ನು ನೋಡಿ ಅರ್ಥೈಸಿಕೊಂಡರೆ ತಪ್ಪಿದ ಲೆಕ್ಕಾಚಾರ ಅವರಿಗೇ ಅರ್ಥವಾಗುತ್ತದೆ, ಸರಿದಾರಿಯೂ ಗೋಚರಿಸುತ್ತದೆ. ಎಲ್ಲರಿಗೂ ಬೇಕಾಗಿದ್ದೂ ಅದೇ...(ಒನ್ ಇಂಡಿಯಾ ಕನ್ನಡ)


Click it and Unblock the Notifications











