ಶಿವಣ್ಣನಿಗೆ ಅಲ್ಲು ಅರ್ಜುನ್ ಮದುವೆಯ ಕರೆಯೋಲೆ
ತೆಲುಗು ಚಿತ್ರರಂಗದ ಜನಪ್ರಿಯ ನಟ ಅಲ್ಲು ಅರ್ಜುನ್ ಭಾನುವಾರ (ಫೆ.20) ಬೆಂಗಳೂರಿಗೆ ಆಗಮಿಸಿ ವರನಟ ಡಾ.ರಾಜ್ ಕುಮಾರ್ ಅವರ ಕುಟುಂಬಿಕರನ್ನು ಭೇಟಿ ಮಾಡಿದರು. ಮಾರ್ಚ್6ರಂದು ಹೈದರಾಬಾದ್ನಲ್ಲಿ ನಡೆಯಲಿರುವ ತಮ್ಮ ಮದುವೆಗೆ ಅಲ್ಲು ಅರ್ಜುನ್ ಆಮಂತ್ರಣ ನೀಡಿದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಮದುವೆಯ ಕರೆಯೋಲೆ ನೀಡಿ ಆಹ್ವಾನಿಸಿದರು. ತೆಲುಗು ಚಿತ್ರರಂಗದ ನಿರ್ಮಾಪಕ ಅಲ್ಲು ಅರವಿಂದ್ ಅವರ ಮಗ ಹಾಗೂ ನಟ ಚಿರಂಜೀವಿ ಅವರ ಸೋದರಳಿಯ ಅಲ್ಲು ಅರ್ಜುನ್ .
ಮುಂಚೆಯಿಂದಲೂ ಅಣ್ಣಾವ್ರ ಕುಟುಂಬದೊಂದಿಗೆ ಚಿರಂಜೀವಿ ಕುಟುಂಬಕ್ಕೆ ಒಡನಾಡವಿತ್ತು. ಚಿರಂಜೀವಿ ಅವರ ಮನೆಯಲ್ಲಿ ಏನೇ ಸಭೆ ಸಮಾರಂಭಗಳು ನಡೆದರೂ ಅಣ್ಣಾವ್ರ ಕುಟುಂಬವನ್ನು ಆಹ್ವಾನಿಸುತ್ತಿದ್ದರು. ಈಗ ಅಲ್ಲು ಅರ್ಜುನ್ ತಮ್ಮ ಮದುವೆಗೆ ರಾಜ್ ಕುಟುಂಬಿಕರನ್ನು ಆಹ್ವಾನಿಸಿದ್ದಾರೆ.
ಶಿವರಾಜ್ ಕುಮಾರ್ ಮಾತನಾಡುತ್ತಾ, ಅಲ್ಲು ಅರ್ಜುನ್ ನಮ್ಮ ಸೋದರನಿದ್ದಂತೆ. ತಪ್ಪದೆ ಅವರ ಮದುವೆಗೆ ನಾವೆಲ್ಲರೂ ಹೋಗುತ್ತೇವೆ ಎಂದಿದ್ದಾರೆ. ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಅಲ್ಲು ಅರ್ಜುನ್ ಮದುವೆಗೆ ಶುಭ ಕೋರಿದರು.
ಅಂದಹಾಗೆ ಅಲ್ಲು ಅರ್ಜುನ್ ಮದುವೆ ಸ್ನೇಹಾ ರೆಡ್ಡಿ ಅವರೊಂದಿಗೆ ಮಾರ್ಚ್ 6ರಂದು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಕಳೆದ ನವೆಂಬರ್ 26ರಂದು ಅಲ್ಲು ಅರ್ಜುನ್ ನಿಶ್ಚಿತಾರ್ಥ ನಡೆದಿತ್ತು. ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಮತ್ತೊಂದು ಅದ್ದೂರಿ ಮದುವೆ ಇದಾಗಿದೆ.


Click it and Unblock the Notifications











