'ದಂಡುಪಾಳ್ಯ' ಸಿನಿಮಾ ಮೇಲೆ ಕತೆ ಕದ್ದ ಆರೋಪ
ಕನ್ನಡ ಚಿತ್ರರಂಗದಲ್ಲಿ ಹೊಸ ಗದ್ದಲ ಎಬ್ಬಿಸಿರುವ 'ದಂಡುಪಾಳ್ಯ' ಮೇಲೆ ಕತೆ ಕದ್ದ ಆರೋಪ ಮಾಡಲಾಗಿದೆ. 'ದಂಡುಪಾಳ್ಯ ಹಂತಕರು' ಎಂಬ ತಮ್ಮ ಪುಸ್ತಕವನ್ನು ಯಥಾವತ್ತಾಗಿ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ತೆರೆಗೆ ತರುತ್ತಿದ್ದಾರೆ ಎಂದು ಮೈಸೂರಿನ ಲೇಖಕ ಶ್ರೀನಾಥ್ ಗುರುತರ ಆರೋಪ ಮಾಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.
ತಮ್ಮ ಕೃತಿ 'ದಂಡುಪಾಳ್ಯ ಹಂತಕರು' ಮೈಸೂರಿನ 'ಆಂದೋಲನ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದೇ ಧಾರಾವಾಹಿಯನ್ನು 1990ರಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದೆ. ಈ ಪುಸ್ತಕವನ್ನೇ ಈಗ ಶ್ರೀನಿವಾಸರಾಜು 'ದಂಡುಪಾಳ್ಯ' ಹೆಸರಿನಲ್ಲಿ ಚಿತ್ರ ಮಾಡುತ್ತಿದ್ದಾರೆ ಎಂದು ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ 'ದಂಡುಪಾಳ್ಯ' ಚಿತ್ರದ ನಿರ್ದೇಶಕ ಶ್ರೀನಿವಾಸರಾಜು, ತಾವು ಕುದ್ದಾಗಿ 'ದಂಡುಪಾಳ್ಯ' ಹಂತಕರನ್ನು ಭೇಟಿ ಮಾಡಿ ವಿವರಗಳನ್ನು ಪಡೆದಿದ್ದೇನೆ. ಇಂಟರ್ನೆಟ್ನಲ್ಲೂ ಜಾಲಾಡಿ ಸಾಕಷ್ಟು ಮಾಹಿತಿ ಕಲೆಹಾಕಿ ಚಿತ್ರಕತೆಯನ್ನು ಸಿದ್ಧಪಡಿಸಿದ್ದೇನೆ.
ಶ್ರೀನಾಥ್ ಅವರು ಮಾಡುತ್ತಿರುವ ಕತೆ ಕದ್ದ ಆರೋಪ ಸತ್ಯಕ್ಕೆ ದೂರವಾದ ಮಾತು. ತಾವು ಯಾರದೇ ಕತೆಯನ್ನೂ ಕದ್ದಿಲ್ಲ ಎಂದಿದ್ದಾರೆ. ಚಿತ್ರ ಸೆಟ್ಟೇರಿ ಸಾಕಷ್ಟು ತಿಂಗಳುಗಳು ಕಳೆದ ಮೇಲೆ ಈಗ ಇದ್ದಕ್ಕಿದ್ದಂತೆ 'ದಂಡುಪಾಳ್ಯ' ಚಿತ್ರದ ವಿವಾದ ಭುಗಿಲೆದ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸದ್ಯಕ್ಕೆ ಇವರಿಬ್ಬರ ವಾದ ವಿವಾದಗಳನ್ನು ಫಿಲಂ ಚೇಂಬರ್ ಕಿವಿಕೊಟ್ಟು ಕೇಳುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











