ಬೆಂಗಳೂರು ಗತವೈಭವ ಮರುಕಳಿಸಲಿ: ಪಾರ್ವತಮ್ಮ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಪ್ರಪ್ರಥಮ ಮೇಯರ್ ಎಸ್ ಕೆ ನಟರಾಜ್ ಅವರು ವರನಟ ಡಾ.ರಾಜ್ ಕುಮಾರ್ ಅವರ ಸ್ಮಾರಕವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಬಿಬಿಎಂಪಿ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಂಗಾನಗರದಲ್ಲಿರುವ ಡಾ. ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಪಾರ್ವತಮ್ಮ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮೇಯರ್ ಈ ಭರವಸೆ ನೀಡಿದ್ದಾರೆ.
ಒಂದು ಕಾಲದಲ್ಲಿ ತಾವೂ ಕೂಡಾ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದನ್ನು ಪಾರ್ವತಮ್ಮ ರಾಜ್ಕುಮಾರ್ ಅವರೊಂದಿಗೆ ಸ್ಮರಿಸಿಕೊಂಡ ಮೇಯರ್ರವರು ಡಾ. ರಾಜ್ಕುಮಾರ್ ಅವರು ಇಂದು ನಮ್ಮೊಂದಿಗೆ ಇರದಿದ್ದರೂ ಅವರ ಅಭಿನಯ, ಕನ್ನಡ ಭಾಷೆ ಮೇಲೆ ಅವರಿಗಿದ್ದ ಪ್ರೀತಿ, ಅಭಿಮಾನ ಇಂದಿಗೂ ನಮಗೆ ಮಾರ್ಗದರ್ಶನವೇ ಆಗಿದೆ ಎಂದು ಕೊಂಡಾಡಿದ್ದಾರೆ.
ಪಾರ್ವತಮ್ಮ ರಾಜ್ಕುಮಾರ್ ರವರು ಮಾತನಾಡಿ,ಬಿಬಿಎಂಪಿಗೆ ನೂತನವಾಗಿ ಮೇಯರ್ ಅವರು ಅಯ್ಕೆಯಾಗಿದ್ದಾರೆ. ಬೆಂಗಳೂರು ಮಹಾನಗರಕ್ಕೆ ಈ ಹಿಂದೆ ಇದ್ದ ಹೆಸರುಗಳನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಅವರಿಗೆ ಭಗವಂತ ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.
ನೂತನ ಮೇಯರ್ ಎಸ್.ಕೆ. ನಟರಾಜ್ ಮತ್ತು ಉಪ ಮೇಯರ್ ದಯಾನಂದ ಅವರುಗಳಿಗೆ ಪಾರ್ವತಮ್ಮ ರಾಜ್ಕುಮಾರ್ ಅವರು ಸಿಹಿ ತಿನ್ನಿಸಿ ಶುಭಕೋರಿದರು. ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರುಗಳೂ ಸಹ ನೂತನ ಮೇಯರ್ ಮತ್ತು ಉಪ ಮೇಯರ್ ಅವರುಗಳನ್ನು ಅಭಿನಂದಿಸಿದರು.
ಇದಕ್ಕೂ ಮುನ್ನ ಮೇಯರ್ ಎಸ್.ಕೆ. ನಟರಾಜ್ ಅವರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ. ರಾಜ್ಕುಮಾರ್ರವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದರು. ಇವರೊಂದಿಗೆ ಉಪ ಮೇಯರ್ ದಯಾನಂದ್ ಕೂಡಾ ಜೊತೆಗಿದ್ದರು.


Click it and Unblock the Notifications











