ಮೀಟ್ ದಿ ಪ್ರೆಸ್ನಲ್ಲಿ ಕಥೆಗಾರ ಮಂಜಣ್ಣ

ಮೀಟ್ ದಿ ಪ್ರೆಸ್ನ ಮೊದಲ ಅತಿಥಿ ನಿರ್ಮಾಪಕ ಕೆ.ಮಂಜು. ತಮ್ಮ ಬಾಲ್ಯದ ದಿನಗಳಿಂದ ಹಿಡಿದು ಉದ್ಯಮಕ್ಕೆ ಬಂದ ಎಲ್ಲಾ ಕ್ಷಣಗಳನ್ನು ಮಂಜು ಮೆಲುಕು ಹಾಕಿದರು. ಇದರಲ್ಲಿ ಸತ್ಯ ಎಷ್ಟು ಅನ್ನೋದಷ್ಟೇ ಜಿಜ್ಞಾಸೆ. ಯಾಕೆಂದರೆ, ಮಂಜು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಉದ್ಯಮಕ್ಕೆ ಹೋದ ವರ್ಷ 350 ಕೋಟಿ ಲಾಸ್ ಆಗಿದೆ ಅಂತ ಪುಗ್ಗೆ ಹಾರಿಸಿದ್ದು, ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾಗೆ ಐದು ಕೋಟಿ ಖರ್ಚಾಗಿದೆ ಅಂತ ಬೂಸಿ ಬಿಟ್ಟಿದ್ದು ಇದೇ ಮಂಜು. ಗೋವಾ ಚಿತ್ರೋತ್ಸವಕ್ಕೆ ಬಂದು, ಸಿನಿಮಾ ನೋಡದೆ ಬೀಚ್ಗಳಲ್ಲಿ ಅಡ್ಡಾಡಿಕೊಂಡು ಬಂದದ್ದೂ ಇದೇ ಮಂಜು.
ಇಂತಿಪ್ಪ ಮಂಜು ಅವರೇ ಮೀಟ್ ದಿ ಪ್ರೆಸ್ ಅತಿಥಿಯಾಗಿದ್ದು ಯಾಕೆ? ಉತ್ತರ ಸರಳ. ನಿರ್ಮಾಪಕರ ಸಂಘದ ಬಗೆಗೆ ಬೇಸರ ಇರುವವರ ಪೈಕಿ ಅವರೂ ಒಬ್ಬರು. ಸಂಘದ ನಡಾವಳಿಗಳ ವಿರುದ್ಧ ಅವರು ಮಾತಾಡುವ ಸಾಧ್ಯತೆ ಹೆಚ್ಚು. ಆದರೆ, ಮೀಟ್ ದಿ ಪ್ರೆಸ್ನಲ್ಲಿ ಅವರು ವಾಚಾಮಗೋಚರವಾಗಿ ಸಂಘವನ್ನೇನೂ ದೂರಲಿಲ್ಲ!
'ಪತ್ರಕರ್ತರು ಇನ್ನೆಷ್ಟು ಕುಡಿದಾರು? ಹಾಗೆ ನೋಡಿದರೆ, ರಾತ್ರಿ ಹೊತ್ತು ಊಟಕ್ಕೆ ಉಳಿಯುವವರೂ ಕಡಿಮೆ. ನಿರ್ಮಾಪಕರು ತಮ್ಮವರನ್ನೆಲ್ಲಾ ಕರೆಸಿ, ಪಾನೋಪಚಾರ ಮಾಡಿ ಹಣ ಖರ್ಚಾಯಿತು ಅಂತ ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವು ಇಲ್ಲ' ಅನ್ನೋದು ಮಂಜು ನುಡಿಮುತ್ತು.
ಈ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆಯನ್ನು ಅವರು ಕೊಟ್ಟಿದ್ದಾರೆ. ಅಂದಹಾಗೆ, ಮೀಟ್ ದಿ ಪ್ರೆಸ್ನಲ್ಲಿ ಕೆಲವು ಸುದ್ದಿಮಿತ್ರರು ಹೆಮ್ಮೆಯಿಂದ ಶರಾಬು ಗಲಾಸನ್ನು ಕೈಲಿ ಹಿಡಿದೇ ಮಂಜು ಮಾತಿಗೆ ಕಿವಿ ಕೊಟ್ಟಿದ್ದರು! ಆತಿಥೇಯರೇ ಅತಿಥಿಗಳಾದಾಗ ಇಂಥ ಅಭಾಸಗಳು ಸಹನೀಯವೇನೊ!?
ಪೂರಕ ಓದಿಗೆ:
ಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?
ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು
ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ
ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ


Click it and Unblock the Notifications











