ಆಂಧ್ರಕ್ಕೆ ಜಿಗಿದ ಚೆಲುವಿನ ಚಿಲಿಪಿಲಿ ಚಿಗರೆ ರೂಪಿಕಾ
'ಚೆಲುವಿನ ಚಿಲಿಪಿಲಿ' ಮೂಲಕ ಕನ್ನಡಕ್ಕೆ ಕಾಲಿಟ್ಟ ರೂಪಿಕಾ, ಈಗ ತೆಲುಗಿನ ಚಿತ್ರವೊಂದರಲ್ಲಿ ಆಫರ್ ಗಿಟ್ಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ರೂಪಿಕಾ ಟಾಲಿವುಡ್ಗೆ ಜಿಗಿಯುವುದು ಬಹುತೇಕ ಖಚಿತವಾಗಿದೆ. ಕಾಲ್ಗೆಜ್ಜೆ, ತೀರ್ಥರೂಪ, ಮಾಯದಂಥ ಮಳೆ ಮುಂತಾದವು ರೂಪಿಕಾ ಅಭಿನಯದ ಕನ್ನಡ ಚಿತ್ರಗಳು.
ನಿರ್ದೇಶಕ ಸಿದ್ದಲಿಂಗಯ್ಯ ಶೋಧಿಸಿದ ಪ್ರತಿಭೆ ಚರಣ್ ರಾಜ್ ಗೊತ್ತಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲೆಲ್ಲ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಚರಣ್ ರಾಜ್ ಈಗ ತಾವೇ ಒಂದು ತೆಲುಗು ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನೈಜ ಘಟನೆಯೊಂದನ್ನ ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾದ ಹೆಸರು 'ನಾಗರಾಜ ಅನಿತಾ ಯಥಾರ್ಥ ಪ್ರೇಮಕಥ'. ಅವರ ಈ ಚಿತ್ರಕ್ಕೇ ರೂಪಿಕಾ ನಾಯಕಿಯಾಗಿ ಗೊತ್ತಾಗಿದ್ದಾರೆ. ಈ ಚಿತ್ರದ ಹೀರೋ ಅಮರ್.
ಮಾತುಕಥೆ ಹಂತದಲ್ಲಿರುವ ಈ ಸಿನಿಮಾ ಓಕೆ ಆದರೆ ಈ ಚಿತ್ರದ ಮೂಲಕ ಕನ್ನಡತಿ ರೂಪಿಕಾ ಕೂಡಾ ತೆಲುಗು ಭಾಷೆಯಲ್ಲಿ ನಟಿಸಿದ ಗರಿಮೆ ಹೊಂದಲಿದ್ದಾರೆ. ಇದೇ ಚಿತ್ರ ಆಕೆಯ ಟಾಲಿವುಡ್ ಭವಿಷ್ಯಕ್ಕೂ ದೊಡ್ಡ ಮೆಟ್ಟಿಲಾಗಬಹುದು. ಹೇಳುವಂತಿಲ್ಲ. (ಒನ್ಇಂಡಿಯಾ ಕನ್ನಡ)


Click it and Unblock the Notifications











