ಮುನಿರತ್ನಗೆ ಕೊಬ್ರಿ-ಸಕ್ಕರೆ; ಕೊಬ್ರಿಗೆ 'ಮುನಿ'ಸು?
ಮುನಿರತ್ನರ ಕಠಾರಿವೀರ ಸುರಸುಂದರಾಂಗಿ ಹಾಗೂ ಕೆ ಮಂಜು ಅವರ ಗಾಡ್ ಫಾದರ್ ಚಿತ್ರದ ಬಿಡುಗಡೆ ವಿವಾದ ಈಗ ಇನ್ನೂ ಕಗ್ಗಂಟಾಗಿದೆ. ಫಿಲಂ ಚೇಂಬರ್ ಮೆಟ್ಟಿಲೇರಿದ್ದ ಸಭೆ ಕೊನೆಗೂ ಇಂದು (27 ಏಪ್ರಿಲ್ 2012) ನಡೆದರೂ ಯಾವ ಪ್ರಯೋಜನವೂ ಆಗಿಲ್ಲ. ಕಾರಣ, ಸಂಧಾನ ಸಭೆಯಿಂದಲೇ ನಿರ್ಮಾಪಕ ಕೆ ಮಂಜು ಎದ್ದು ಹೋಗಿದ್ದು, ಸಂಧಾನ ಸಭೆಗೆ ತಿಲಾಂಜಲಿ ಇತ್ತಂತಾಗಿದೆ.
ಉಪೇಂದ್ರ ನೇತೃತ್ವದಲ್ಲಿ ವಿಫಲವಾದ ಸಂಧಾನ ಸಭೆ, ಅಂಬರೀಷ್ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದರೂ ಸಭೆ ಮತ್ತೆ ಮತ್ತೆ ಮುಂದೂಡಲ್ಪಟ್ಟು ಏನಾಗಲಿದೆಯೋ ಎಂಬ ಹಂತಕ್ಕೆ ಬಂದು ನಿಂತಿತ್ತು. ಕೊನೆಗೂ ಇಂದು ಸೇರಿದ್ದ ಸಭೆಯನ್ನು ತಾವು ಎದ್ದು ಹೊರಟುಹೋಗುವ ಮೂಲಕ ಯಾವ ಸಂಧಾನವೂ ಇಲ್ಲದೇ ಸಮಾಪ್ತಿಗೊಳಿಸಿದ್ದಾರೆ ಕೆ ಮಂಜು.
ಇದೀಗ ಮತ್ತೆ ವಿವಾದ ಮತ್ತೂ ಜಟಿಲವಾದಂತಾಗಿದೆ. ಅಂಬರೀಷ್ ಸಭೆಗೆ ಬರುವ ಆಸಕ್ತಿ ತೋರಿಸುತ್ತಿಲ್ಲ. ಉಪೇಂದ್ರ ಬೆಂಗಳೂರು ಬಿಟ್ಟು ಈಗಾಗಲೇ ದುಬೈ ತಲುಪಿಯಾಗಿದೆ. ಪಿಲಂ ಚೇಂಬರ್ ಸಂಧಾನ ಸಭೆಯಿಂದಲೂ ಎದ್ದು ಹೋಗಿರುವ ಮಂಜು ಅವರ ಮನವೊಲಿಕೆ ಪ್ರಯತ್ನವೂ ಸಫಲವಾಗಿಲ್ಲ. ಮುಂದೇನು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಸಂಭವ ಕಡಿಮೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











