ಮುನಿರತ್ನ ಕಠಾರಿವೀರ ಮೇ 11ಕ್ಕೆ ಮುಂದೂಡಲು ಕಾರಣ?
ಬಹುವಿವಾದದಲ್ಲಿ ಸಿಕ್ಕಿಕೊಂಡಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಮೇ 11ಕ್ಕೆ ಬಿಡುಗಡೆಯಾಗಲಿದೆ ಎಂಬ ಹಾಟ್ ನ್ಯೂಸ್ ಗಾಂಧಿನಗರದಿಂದ ಬಂದಿದೆ. ಇಷ್ಟು ದಿನವೂ ಅಣ್ಣಾಬಾಂಡ್ ಬೆನ್ನಿಗೇ ತೆರೆಗೆ ಬರಲು ಸಿದ್ಧವಾಗಿದ್ದ ಕಠಾರಿವೀರ ಹತ್ತು ದಿನಗಳಷ್ಟು ಮುಂದಕ್ಕೆ ಹೋದಂತಾಗಿದೆ. ಸೆನ್ಸಾರ್ ಮುಗಿಸಿ 'ಯು/ಎ' ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರವೀಗ ಮೇ 11ಕ್ಕೆ ಬರಲಿದೆಯೇ? ಅಷ್ಟು ಮುಂದಕ್ಕೆ ಹೋಗಲು ಕಾರಣವೇನು?
ಇದೀಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ ಮುನಿರತ್ನ ನಿರ್ಮಾಣದ ಕಠಾರಿವೀರ. ಸೆನ್ಸಾರ್ ಮುಗಿಯುವದನ್ನೇ ಕಾಯುತ್ತಿದ್ದ ಕಠಾರಿವೀರ ಚಿತ್ರ ಮುಗಿದ ತಕ್ಷಣ ಬಿಡುಗಡೆ ಘೋಷಿಸಿದರೆ ಅಪಾಯ ತಪ್ಪಿದ್ದಲ್ಲ ಎಂಬುದು ಮುನಿರತ್ನರಿಗೆ ಮನವರಿಕೆಯಾಗಿದೆ. ಕಾರಣ ಚಿತ್ರದ ಪಬ್ಲಿಸಿಟಿ ಇನ್ನೂ ಪ್ರಾರಂಭವಾಗಿಲ್ಲ. ಪತ್ರಿಕಾ ಜಾಹೀರಾತು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಪ್ರಚಾರಕಾರ್ಯ ಆರಂಭವಾಗಿಯೇ ಇಲ್ಲ.
ಅಷ್ಟೇ ಅಲ್ಲ, ಇತ್ತೀಚಿನ ಸಿಸಿಐ ನೀಡಿದ ತೀರ್ಪಿನಿಂದಾಗಿ ಪರಭಾಷಾ ಚಿತ್ರಗಳ ಬಿಡುಗಡೆಗೆ ಕರ್ನಾಟಕದಲ್ಲೀಗ ಯಾವುದೇ ಅಡೆತಡೆಗಳಿಲ್ಲ. ಇದರಿಂದ ತೆಲುಗಿನ 'ದಮ್ಮು' ಕರ್ನಾಟಕದಲ್ಲಿ ಬರೋಬ್ಬರಿ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಒಂದೆರಡು ವಾರ ದಮ್ಮು ಅಬ್ಬರ ಇರಲಿದೆ ಜೊತೆಗೆ 'ಅಣ್ಣಾ ಬಾಂಡ್'ಗೂ ಚಿತ್ರಮಂದಿರಗಳು ಬುಕ್ ಆಗಿವೆ. ಹೀಗಾಗಿ ಈಗಲೇ ಕಠಾರಿವೀರ ಬಿಟ್ಟರೆ ಕಷ್ಟ ತಪ್ಪಿದ್ದಲ್ಲ.
ಹಾಗಾಗಿ, 'ಕಠಾರಿ ವೀರ ಸುರಸುಂದರಾಂಗಿ' ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಬಿಡುಗಡೆ ಮುಂದಕ್ಕೆ ಹೋಗಲು ಇದು ಇನ್ನೊಂದು ಕಾರಣ. ಜೊತೆಗೆ ನಿರ್ಮಾಪಕರಾಗಿರುವುದರಿಂದ ಮುನಿರತ್ನರಿಗೆ ಚಿತ್ರ ಲಾಭ ಮಾಡಬೇಕಾಗಿರುವುದು ಎಲ್ಲದಕ್ಕಿಂತ ದೊಡ್ಡ ವಿಷಯ. ಜೊತೆಗೆ ಅಂಬರೀಷ್ ನೇತೃತ್ವದಲ್ಲಿ ನಡೆಯಬೇಕಾಗಿರುವ ಸಭೆ ಮುಂದೆ-ಮುಂದೆ ಹೋಗುತ್ತಿರುವುದೂ ಮತ್ತೊಂದು ಕಾರಣ. (ಒನ್ ಇಂಡಿಯಾ ಕನ್ನಡ)


Click it and Unblock the Notifications











