ರಿಯಲ್ ಸ್ಟಾರ್ ಉಪೇಂದ್ರ ಋಣ ಸಂದಾಯ!
ಉಪೇಂದ್ರ ಬೇರೆ ವಿಷಯದಲ್ಲಿ ಏನೇ ಇದ್ದರೂ ಬೇರೆಯವರಿಗೆ ಸಲ್ಲಿಸಬೇಕಾದ ದುಡ್ಡಿನ ವಿಷಯದಲ್ಲಿ ಮಾತ್ರ ಕಟ್ಟುನಿಟ್ಟು. ಆ ವಿಚಾರದಲ್ಲಿ ಉಪ್ಪಿ ಹೆಸರು ಕೆಡಿಸಿಕೊಂಡಿದ್ದು ಕಡಿಮೆ. ಕಮಿಟ್ಮೆಂಟ್ ಅಂದರೆ ಅದು ಉಪೇಂದ್ರ ಕಮೀಟ್ಮೆಂಟ್ ಇದ್ದಹಾಗೆ ಎಂದು ಗಾಂಧಿನಗರದ ಹೆಚ್ಚಾಗಿ ಮಾತನಾಡಿಕೊಳ್ಳುತ್ತದೆ.
ಈ ಮಾತು ನಿಜ ಎನ್ನಲು ಇನ್ನೊಂದು ಪುರಾವೆ ಸಿಕ್ಕಿದೆ. ಉಪೇಂದ್ರ ಸದ್ಯ 'ಸೂಪರ್' ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಕೋಟ್ಯಂತರ ವಹಿವಾಟು ನಡೆದಿದೆ ಮತ್ತು ರಾಕ್ಲೈನ್ ಡಬಲ್ ಬೆಳೆ ತೆಗೆದಿದ್ದಾರೆ. ನಿಮಗೆ ಗೊತ್ತಿರಲಿ, ಈ ಎಲ್ಲ ಲಾಭದಲ್ಲಿ ಉಪ್ಪಿಯ ಶೇರ್ ಕೂಡ ಇದೆ.
ಇಷ್ಟೆಲ್ಲಾ ಆದ ಮೇಲೆ ಉಪ್ಪಿ ಮೊನ್ನೆ ಮೊನ್ನೆ ಒಂದೂವರೆ ಲಕ್ಷ ರುಪಾಯಿಯನ್ನು ಸಂಗೀತ ನಿರ್ದೇಶಕ ವಿ. ಮನೋಹರ್ ಮನೆಬಾಗಿಲಿಗೆ ತಲುಪಿಸಿದ್ದಾರೆ. ಹೀಗೆ ಮಾಡಲು ಕಾರಣವಿದೆ. ಉಪ್ಪಿ ಮೊದಲು ಮನೋಹರ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದರು. ಜೊತೆಗೆ ಅವರಿಗೆ ಮನೋಹರ್ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ.
ನೆನಪಿರಲಿ, ಮನೋಹರ್ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಲಾಂಚ್ ಮಾಡಿದ್ದೇ ಉಪ್ಪಿ! ಸೂಪರ್ ಚಿತ್ರಕ್ಕೆ ಮನೋಹರ್ ಒಂದೂವರೆ ತಿಂಗಳು ಕೆಲಸ ಮಾಡಿದರು. ಕೊನೆಗೆ ಕಾರಣಾಂತರಗಳಿಂದ ಆ ಜಾಗಕ್ಕೆ ಹರಿಕೃಷ್ಣ ಬಂದರು. ಮನೋಹರ್ ಆಗಲೂ ಯಾವುದೇ ಬೇಸರ ಮಾಡಿಕೊಳ್ಳದೇ ಹಿಂದಿರುಗಿದರು.
ಆಗ ಮನೋಹರ್ ಮಾಡಿದ ಕೆಲಸಕ್ಕೆ ಈಗ ಉಪ್ಪಿ ಹಣ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಕಳುಹಿಸುವ ಅಗತ್ಯ ಅಥವಾ ಅವಶ್ಯಕತೆ ಖಂಡಿತ ಇರಲಿಲ್ಲ. ಹಾಗಂತ ಮನೋಹರ್ ಕೂಡ ಕೇಳಿರಲಿಲ್ಲ. ಹೀಗಿದ್ದೂ ಗುಟ್ಟಾಗಿ ಹಣ ತಲುಪಿಸಿ, ತಮ್ಮಿಬ್ಬರ ನಡುವಿನ ಗೆಳೆತನಕ್ಕೆ ಇನ್ನೊಂದಿಷ್ಟು ಪನ್ನೀರು ಸುರಿದಿದ್ದಾರೆ ಉಪ್ಪಿ!(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











