ಅಣ್ಣಾಬಾಂಡ್ ರಿಲೀಸ್ ಗೆ 2ದಿನ ಮುನ್ನ ನಿರ್ದೇಶಕರು ಹೇಳಿದ್ದೇನು
ಅಣ್ಣಾಬಾಂಡ್ ಚಿತ್ರದಲ್ಲಿ ಏನೇನು ಎಲೆಮೆಂಟ್ ಗಳು ಇರಬೇಕೆಂದು ಪ್ರೇಕ್ಷಕ ಬಯಸುತ್ತಾನೋ ಅದೆಲ್ಲಾ ಚಿತ್ರದಲ್ಲಿದೆ. ನಿಮಗೆಲ್ಲೂ ಚಿತ್ರ ಬೋರ್ ಹೊಡೆಸುವುದಿಲ್ಲ ಎನ್ನುವ ಗ್ಯಾರಂಟಿ ನಾನು ನೀಡುತ್ತೇನೆ. ಇದೊಂದು ಪಕ್ಕಾ ಪೈಸಾ ವಸೂಲ್ ಚಿತ್ರ, ಅದರಲ್ಲಿ ಸಂಶಯನೇ ಬೇಡ ಎಂದು ಚಿತ್ರದ ನಿರ್ದೇಶಕ ದುನಿಯಾ ಸೂರಿ ಭರವಸೆಯ ಮಾತುಗಳನ್ನು ಆಡಿದ್ದಾರೆ.

ನಿಮ್ಮ ಜೀವನದ ಎರಡು ಗಂಟೆ ಅಮೂಲ್ಯ ಸಮಯವನ್ನು ನನ್ನ ಚಿತ್ರಕ್ಕೆ ನೀವು ಮೀಸಲಿಡುತ್ತೀರಿ. ನಿಮ್ಮ ಸಮಯ ಮತ್ತು ಹಣಕ್ಕೆ ನ್ಯಾಯ ಕೊಡಿಸುವುದು ನಿರ್ದೇಶಕನಾಗಿ ನನ್ನ ಕರ್ತವ್ಯ. ನಿಮಗೆ ಈ ಚಿತ್ರ ಖಂಡಿತಾ ಮನೋರಂಜನೆ ನೀಡುತ್ತದೆ. ಚಿತ್ರ ಇಷ್ಟು ಚೆನ್ನಾಗಿ ಮೂಡಿಬರಲು ಎಲ್ಲರ ಸಹಕಾರಕ್ಕೆ ನಾನು ಖುಣಿಯಾಗಿದ್ದೇನೆ ಎಂದು ಸೂರಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಜಂಗ್ಲಿ, ಜಾಕಿ ಚಿತ್ರದ ಛಾಯೆ ಈ ಚಿತ್ರದಲ್ಲಿ ಖಂಡಿತಾ ಇಲ್ಲ. ಅವೆರಡು ಚಿತ್ರಗಳ ಕಾನ್ಸೆಪ್ಟ್ ಬೇರೆ ಈ ಚಿತ್ರದ ಕಾನ್ಸೆಪ್ಟ್ ಬೇರೆ. ನನ್ನ ಚಿತ್ರ ಬಿಡುಗಡೆಯಾಗಿ ಜನ ಮೆಚ್ಚುಗೆ ಗಳಿಸಬೇಕು. ಆಮೇಲೆ ನನ್ನ ಚಿತ್ರದ ಬಗ್ಗೆ ನಾನು ಮಾತನಾಡಬೇಕು. ಹೀಗಾಗಿ ಎಲ್ಲೂ ಇದುವರೆಗೆ ನಾನು ಚಿತ್ರದ ಬಗ್ಗೆ ಕೊಚ್ಚಿ ಕೊಂಡಿಲ್ಲ ಎಂದು ಸೂರಿ ಟಿವಿ 9ಗೆ ನೀಡಿದ ನೇರ ಸಂದರ್ಶನದಲ್ಲಿ ಹೇಳಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಅಣ್ಣಾಬಾಂಡ್ ಚಿತ್ರಕ್ಕೆ ಇರುವಷ್ಟು ಹೈಪ್ ಇದುವರೆಗಿನ ನನ್ನ ಇತರ ಚಿತ್ರಗಳಿಗಿರಲಿಲ್ಲ. ಹಾಗಾಗಿ ಚಿತ್ರವನ್ನು ಪ್ರೇಕ್ಷಕ ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವ ಭಯ ಸಹಜ. ಒಟ್ಟಿನಲ್ಲಿ ಒಳ್ಳೆ ಚಿತ್ರ ನೀಡಿದ್ದೇನೆ ಎನ್ನುವ ಆತ್ಮತೃಪ್ತಿ ನನಗಿದೆ. ಇನ್ನು ಚಿತ್ರವನ್ನು ಹರಸಬೇಕಾದವರು ನೀವು ಎಂದು ನಿರ್ದೇಶಕ ಸೂರಿ ಅಣ್ಣಾಬಾಂಡ್ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
ಬಹು ನಿರೀಕ್ಷಿತ ಈ ಚಿತ್ರ ನಾಡದ್ದು ಕಾರ್ಮಿಕರ ದಿನಾಚರಣೆಯ ದಿನದದಂದು (ಮೇ 1) ಬಿಡುಗಡೆಯಾಗಲಿದೆ.


Click it and Unblock the Notifications











