ಈ ವಾರ 'ರಾಜ್ ವಿಷ್ಣು' ಜೊತೆ ಮತ್ತೆರಡು ಚಿತ್ರಗಳು ತೆರೆಗೆ
ಸ್ಯಾಂಡಲ್ವುಡ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜುಲೈ ತಿಂಗಳಲ್ಲಿ ಪ್ರತಿ ವಾರಕ್ಕೂ ಐದಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆ ಆಗಿ ಬರೋಬರಿ 20 ಚಿತ್ರಗಳು ತೆರೆ ಕಂಡಿದ್ದವು. ಈಗ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮೂರು ಚಿತ್ರಗಳು ತೆರೆಕಾಣುತ್ತಿವೆ.
ಈ ವಾರ ಬಿಡುಗಡೆ ಆಗಲು ಸಜ್ಜಾಗಿರುವ ಚಿತ್ರಗಳಲ್ಲಿ ಎರಡು ಚಿತ್ರಗಳು ಔಟ್ ಅಂಡ್ ಔಟ್ ಕಾಮಿಡಿ ಚಿತ್ರಗಳು ಎಂಬುದು ವಿಶೇಷವಾಗಿದೆ. ನಾಳೆ ಗಾಂಧಿನಗರಕ್ಕೆ ಕಾಲಿಡುತ್ತಿರುವ ಆ ಮೂರು ಚಿತ್ರಗಳು ಯಾವುವು? ಆ ಚಿತ್ರಗಳ ಬಗೆಗಿನ ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿರಿ..

'ರಾಜ್ ವಿಷ್ಣು'
ನಾಳೆ ಬಿಡುಗಡೆ ಆಗುತ್ತಿರುವ ಕಂಪ್ಲೀಟ್ ಎಂಟರ್ಟೈನ್ಮೆಂಟ್ ನೀಡುವ ಚಿತ್ರಗಳಲ್ಲಿ 'ರಾಜ್ ವಿಷ್ಣು' ಚಿತ್ರ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ. ಕಾರಣ ಈ ಹಿಂದೆ 'ಅಧ್ಯಕ್ಷ' ಚಿತ್ರದ ಮೂಲಕ ಕಮಾಲ್ ಮಾಡಿದ್ದ ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ರವರು ಈ ಚಿತ್ರದಲ್ಲಿ ಮತ್ತೆ ಒಂದಾಗಿ ನಟಿಸಿದ್ದು, ಆ ಸಿನಿಮಾವನ್ನು ಮತ್ತೆ ನೆನಪು ಮಾಡಿದ್ದಾರೆ. ಈ ಚಿತ್ರದಲ್ಲಿ ರಾಜ್ ಅಭಿಮಾನಿಯಾಗಿ ಶರಣ್, ವಿಷ್ಣು ಅಭಿಮಾನಿಯಾಗಿ ಚಿಕ್ಕಣ್ಣ ಮಿಂಚಿದ್ದಾರೆ. ಚಿತ್ರದ ನಾಯಕಿಯಾಗಿ ವೈಭವಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಾಧು ಕೋಕಿಲ ಸಹ ಬಣ್ಣಹಚ್ಚಿದ್ದಾರೆ.

ವಿಶೇಷ ಪಾತ್ರದಲ್ಲಿ ರೋರಿಂಗ್ ಸ್ಟಾರ್
'ರಾಜ್ ವಿಷ್ಣು' ಚಿತ್ರದ ಇನ್ನೊಂದು ವಿಶೇಷತೆ ಎಂದರೆ ರೋರಿಂಗ್ ಸ್ಟಾರ್ ಶ್ರೀಮುರುಳಿ ರವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಎಲ್ಲಾ ಪ್ಲಸ್ ಪಾಯಿಂಟ್ ಜೊತೆಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರಾಮು ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ 'ಗಜ', 'ರಾಮ್', 'ಹುಡುಗರು', 'ಪವರ್***' ನಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಕೆ.ಮಾದೇಶ್ ಆಕ್ಷನ್ ಕಟ್ ಹೇಳಿದ್ದಾರೆ.

'ತಾತನ್ ತಿಥಿ ಮೊಮ್ಮಗನ ಪ್ರಸ್ಥ'
'ತಿಥಿ' ಚಿತ್ರ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚುರಿಗೌಡ ಅಭಿನಯಿಸಿರುವ 'ತಾತನ್ ತಿಥಿ ಮೊಮ್ಮಗನ ಪ್ರಸ್ಥ' ಚಿತ್ರವು ನಾಳೆ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಶುಭಾ ಪೂಂಜ ನಾಯಕಿಯಾಗಿ, 'ಮಂಡ್ಯ ಸ್ಟಾರ್' ಸಿನಿಮಾದ ಲೋಕಿ ನಾಯಕನಾಗಿ ನಟಿಸಿದ್ದಾರೆ. ಡಬಲ್ ಮೀನಿಂಗ್ ಇದ್ದರೂ, ವಲ್ಗರ್ ಎನಿಸದ ಸಭಾಷಣೆಯನ್ನು ಮಳವಳ್ಳಿ ಸಾಯಿಕೃಷ್ಣ ರವರು, ಕಥೆ-ಚಿತ್ರಕಥೆಯನ್ನು ಮುಸ್ಸಂಜೆ ಮಹೇಶ್ ರವರು ಬರೆದಿದ್ದಾರೆ. ಕೃಷ್ಣಚಂದ್ರು ಆಕ್ಷನ್ ಕಟ್ ಹೇಳಿದ್ದಾರೆ. ಓಂಪ್ರಕಾಶ್ ರಾವ್, 'ತಿಥಿ' ಚಿತ್ರದ ತಮ್ಮಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಶ್ರೀ ಶ್ರೀನಿವಾಸ ಗ್ರೂಫ್ಸ್ ಬ್ಯಾನರ್ ನಲ್ಲಿ ಮಧುಕುಮಾರ್ ಮತ್ತು ಮಂಜುನಾಥ ಚಿತ್ರ ನಿರ್ಮಾಣ ಮಾಡಿದ್ದಾರೆ.

ಸ್ನೇಹಚಕ್ರ
ಕಳೆದವಾರ ಕಾರಣಾಂತರಗಳಿಂದ ಬಿಡುಗಡೆ ಆಗದ 'ಸ್ನೇಹಚಕ್ರ' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ವಿಜಯ್ ವೆಂಕಟ್ ಎಂಬ ಯುವ ನಟ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನ್ವಿತಾ ಎಂಬುವವರು ಜೊತೆಯಾಗಿ ನಟಿಸಿದ್ದಾರೆ. 'ಎ ಫ್ಯಾನ್ ಆಫ್ ಪವರ್ ಸ್ಟಾರ್' ಎಂದು ಚಿತ್ರಕ್ಕೆ ಸಬ್ಟೈಟಲ್ ಸಹ ನೀಡಲಾಗಿದೆ. ಮಂಜು ವಿಷ್ಣುವರ್ಧನ್ ಎಂಬುವವರು ನಿರ್ದೇಶನ ಮಾಡಿರುವ 'ಸ್ನೇಹಚಕ್ರ' ಚಿತ್ರವನ್ನು ಸುರೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ರಾಜ್ ಭಾಸ್ಕರ್ ಸಂಗೀತ ಚಿತ್ರಕ್ಕಿದೆ.

ನಿಮ್ಮ ಆಯ್ಕೆ ಯಾವುದು?
ವರಮಹಾಲಕ್ಷ್ಮಿ ಹಬ್ಬದ ದಿನದಂದು ಗಾಂಧಿನಗರಕ್ಕೆ ಕಾಲಿಡುತ್ತಿರುವ 'ರಾಜ್ ವಿಷ್ಣು', 'ತಾತನ್ ತಿಥಿ ಮೊಮ್ಮಗನ್ ಪ್ರಸ್ಥ' ಮತ್ತು 'ಸ್ನೇಹಚಕ್ರ' ಈ ಮೂರು ಸಿನಿಮಾಗಳಲ್ಲಿ ನಿಮ್ಮ ಆಯ್ಕೆಯ ಮೊದಲ ಸಿನಿಮಾ ಯಾವುದು ಎಂದು ಕೆಳಗೆ ನೀಡಲಾಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.


Click it and Unblock the Notifications











