ಪ್ರಭಾಕರನ್ ಚಿತ್ರದಲ್ಲಿಎಎಂಆರ್ ರಮೇಶ್ ತಲ್ಲೀನ
ದಿವಂಗತ ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಜೀವನ ಕತೆಯನ್ನು ಬೆಳ್ಳಿತೆರೆಗೆ ತರಲು ನಿರ್ದೇಶಕ ಎಎಂಆರ್ ರಮೇಶ್ ಯೋಜನೆ ರೂಪಿಸಿರುವುದು ಗೊತ್ತೇ ಇದೆ. ಅವರ ನಿರ್ದೇಶನದ ಸೈನೈಡ್ ಚಿತ್ರ ಹಿಂದಿಗೆ ತರುವ ಉದ್ದೇಶ ಸಹ ರಮೇಶ್ ಅವರಿಗಿದೆ. ಈ ನಿಟ್ಟಿನಲ್ಲಿ ರಮೇಶ್ ಪ್ರಯತ್ನ ಮುಂದುವರಿದಿದೆ.
ಸದ್ಯಕ್ಕೆ ಪ್ರಭಾಕರನ್ ಚಿತ್ರಕತೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದೇನೆ ಎನ್ನುತ್ತಾರೆ ರಮೇಶ್. ಚಿತ್ರಕತೆಯನ್ನು ನವೆಂಬರ್ 27ರಂದು ಅಂತಿಮಗೊಳಿಸುವ ಉದ್ದೇಶ ಅವರದು. ಏಕೆಂದರೆ ಪ್ರಭಾಕರ್ ಸತ್ತಿದ್ದಾನೆಎಂಬ ಸುದ್ದಿಯನ್ನು ಅವರು ಸಂಪೂರ್ಣವಾಗಿ ನಂಬುತ್ತಿಲ್ಲವಂತೆ.
ನವೆಂಬರ್ 27ರಂದು ಪ್ರಭಾಕರನ್ ಸಾರ್ವಜನಿಕ ಭಾಷಣ ಮಾಡುವುದು ಸಾಮಾನ್ಯ. ಹಾಗಾಗಿ ನವೆಂಬರ್ 27 ರ ತನಕ ಕಾಯುತ್ತೇನೆ ಎನ್ನುತ್ತಾರೆ. ಇದು ಚಿತ್ರಕತೆಯ ಕ್ಲೈಮ್ಯಾಕ್ಸ್ ಗೆ ಸಹಕಾರಿಯಾಗಲಿದೆ ಎಂಬ ಯೋಚನೆ ರಮೇಶ್ ಅವರದು. ಕೊಲಂಬೋದ ಮಾಧ್ಯಮಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಶ್ರೀಲಂಕಾ ಸರಕಾರ ಒಪ್ಪಿಗೆ ಕೊಟ್ಟ ಕೂಡಲೆ ಅಲ್ಲಿನ ಸ್ಥಳಗಳಿಗೂ ಭೇಟಿ ನೀಡುವುದಾಗಿ ಅವರು ತಿಳಿಸಿದರು.
ಅಂದಹಾಗೆ ಪ್ರಭಾಕರ್ ಪಾತ್ರವನ್ನು ಯಾರು ಪೋಷಿಸಲಿದ್ದಾರೆ? ಎಂಬ ಪ್ರಶ್ನೆಗೆ ಪ್ರಭಾಕರನ್ ಮುಖ ಚಹರೆಯುಳ್ಳ ವ್ಯಕ್ತಿಯನ್ನೇ ಹುಡುಕುತ್ತಿದ್ದೇವೆ.ಇದೊಂದು ರೀತಿ ನಿಜಕ್ಕೂ ದೊಡ್ಡ ಸವಾಲಿದ್ದಂತೆ ಎನ್ನುತ್ತಾರೆ ರಮೇಶ್. ತಮಿಳು ಪತ್ರಿಕೆಗಳಲ್ಲಿ ಸ್ವತಃ ರಮೇಶ್ ಅವರೇ ಪ್ರಭಾಕರನ್ ಪಾತ್ರವನ್ನು ಪೋಷಿಸಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು.ಆದರೆ ಈ ಸುದ್ದಿಯನ್ನು ರಮೇಶ್ ಸರಾಸಗಟಾಗಿ ತಳ್ಳಿ ಹಾಕಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











