ಮಹಾನ್ ನಿರ್ದೇಶಕನಿಗೆ ಇದೆಂಥಾ ನ್ಯಾಯ?

ನವೀಕರಣದ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಈ ಚಿತ್ರಮಂದಿರ ಇದುವರೆಗೆ ಪುನರಾರಂಭ ಗೊಳ್ಳುವ ಮಾತಿರಲಿ ನವೀಕರಣ ಕಾಮಗಾರಿಗೂ ಇನ್ನೂ ಚಾಲನೆಯಾಗಿಲ್ಲ. ಪುಟ್ಟಣ್ಣ ಶಿಷ್ಯರಾದ ವಿಷ್ಣುವರ್ಧನ್, ಅಂಬರೀಶ್ ಮುಂತಾದವರೂ ಎಷ್ಟೇ ಒತ್ತಡ ತಂದರೂ ಎಸ್ ಎಂ ಕೃಷ್ಣ ಅವರಿಂದ ಹಿಡಿದು ಯಡಿಯೂರಪ್ಪನವರೆಗೂ ಯಾವ ಸರಕಾರವೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದಂತಿಲ್ಲ. ಕೆಲ ಸಮಯ ಈ ಚಿತ್ರಮಂದಿರ ಜಯನಗರ ಪೋಲಿಸ್ ಠಾಣೆಯಾಗಿಯೂ ಪರಿವರ್ತನೆಗೊಂಡಿತ್ತು. ಚಿತ್ರಮಂದಿರದ ಇಂದಿನ ದುಸ್ಥಿತಿಗೆ ಸರಕಾರ ಮತ್ತು ಬಿಬಿಎಂಪಿ ನೇರ ಹೊಣೆ.
ಈಗ ಜಯನಗರದ ಜನತೆ ಚಿತ್ರಮಂದಿರದ ಪುನರಾರಂಭಕ್ಕೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹ ಚಳುವಳಿಯನ್ನು ಶನಿವಾರದಿಂದ (ಜ 29) ಆರಂಭಿಸಿ ಚಳವಳಿಗಿಳಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ, ಎಂ ಎಸ್ ಸತ್ಯು, ವಿ ಮನೋಹರ್, ಶಿವರುದ್ರಯ್ಯ, ಬರಗೂರು ರಾಮಚಂದ್ರಪ್ಪ, ಟಿ ಎನ್ ಸೀತಾರಾಮ್, ನಟಿ ತಾರಾ ಮುಂತಾದವರು ಭಾಗವಹಿಸಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಚಳುವಳಿಯನ್ನು ಯಶಸ್ವಿಗೊಳಿಸಿದರು. ಡಿಮೋಕ್ರೆಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ(DYFI) ಆರಂಭಿಸಿದ ಈ ಸಹಿ ಅಭಿಯಾನಕ್ಕೆ ಸುಮಾರು 250ಕ್ಕೂ ಹೆಚ್ಚಿನ ಮಂದಿ ಬೆಂಬಲ ವ್ಯಕ್ತಪಡಿಸಿದರು.
1985ರಲ್ಲಿ ಆರಂಭವಾದ ಪುಟ್ಟಣ್ಣ ಚಿತ್ರಮಂದಿರ ಬೆಂಗಳೂರಿನ ಮಧ್ಯಮ ವರ್ಗ ಜನರ ಅಚ್ಚುಮೆಚ್ಚಿನ ಸಿನಿಮಾ ಮಂದಿರವಾಗಿತ್ತು. ಜಯನಗರ ಈಗಾಗಲೇ ಪುಟ್ಟಣ್ಣ, ನಂದ, ಶಾಂತಿ ಹಾಗೂ ಸ್ವಾಗತ್ ಚಿತ್ರಮಂದಿರಗಳನ್ನು ಕಳೆದುಕೊಂಡು ಬರಿದಾಗಿದೆ. ಪುಟ್ಟಣ್ಣ ಚಿತ್ರಮಂದಿರದ ನವೀಕರಣದ ಹೊಣೆಯನ್ನು ಬಿಬಿಎಂಪಿ ವಹಿಸಿಕೊಂಡು, ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಇದು ಅಲ್ಲಿ ನೆರದಿದ್ದ ಎಲ್ಲರ ಅಭಿಪ್ರಾಯವೂ ಆಗಿತ್ತು.
ಕನ್ನಡ ಚಿತ್ರರಂಗ ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಮತ್ತು ಮಲ್ಟಿಪ್ಲೆಕ್ಸ್ ಭರಾಟೆಯಲ್ಲಿ ಕನ್ನಡ ಚಿತ್ರಮಂದಿರಗಳು ಸೊರಗಿ ಹೋಗುವುದು ತಪ್ಪಬೇಕು. ಈ ದೇಶ ಕಂಡ ಮಹಾನ್ ನಿರ್ದೇಶಕ ಪುಟ್ಟಣ್ಣ ಹೆಸರಿನಲ್ಲಿರುವ ಚಿತ್ರಮಂದಿರ ನವೀಕರಣಗೊಂಡು ಮತ್ತೆ ಮೊದಲಿನ ಚಿತ್ರಸಂಭ್ರಮ ಮರುಕಳಿಸುವಂತಾಗಲಿ ಎನ್ನುವುದು ನಮ್ಮೆಲ್ಲರ ಆಶಯ. [ಚಿತ್ರಮಂದಿರ]


Click it and Unblock the Notifications











