ವಿಷ್ಣು ನಿಧನ: ಅಂಧ ಅಭಿಮಾನಿಗಳ ಗಲಾಟೆ
ಬೆಂಗಳೂರು, ಡಿ. 30 : ಸಾಹಸಸಿಂಹ ವಿಷ್ಣುವರ್ಧನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ವಿಎಸ್ ಆಚಾರ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಮಾಗಡಿ ರಸ್ತೆ ಹಾಗೂ ಸುಂಕದಕಟ್ಟೆಯಲ್ಲಿ ಅಭಿಮಾನಿಗಳು ಗಲಾಟೆ ಆರಂಭಿಸಿದ್ದು, ಬಸ್ ಗಳಿಗೆ ಕಲ್ಲು ತೂರಾಟ ನಡೆಸಿ ಟೈರ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಮೂರು ಬಸ್ ಗಳು ಜಖಂಗೊಂಡಿವೆ. ನಗರದ ಕೆಲವಡೆ ಉದ್ರಿಕ್ತ ವಾತಾವರಣ ಉಂಟಾಗಿದ್ದು, ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.
ವಿಷ್ಣುವರ್ಧನ್ ಅವರ ಅಕಾಲಿಕ ಮರಣ ಅವರ ಅಭಿಮಾನಿಗಳಿಗೆ ಭಾರಿ ಆಘಾತ ಉಂಟಾಗಿದೆ. 2009 ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ಕರಾಳ ವರ್ಷ ಎಂದರೂ ತಪ್ಪಿಲ್ಲ. ಮಂಗಳವಾರವಷ್ಟೆ ಸುಗಮ ಸಂಗೀತ ದಿಗ್ಗಜ ಸಿ ಅಶ್ವತ್ಥ್ ಅವರನ್ನು ಕಳೆದುಕೊಂಡೆ ಎಲ್ಲರೂ ಅಘಾತಕ್ಕೊಳಗಾಗಿರುವಾಗ, ಈ ಘಟನೆ ನಡೆದ 12 ಗಂಟೆ ಕಳೆದಿಲ್ಲ, ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅವರ ವಿಧಿವಶರಾಗಿದ್ದು, ಬಹುಶಃ ಕನ್ನಡಿಗರಿಗೆ ಅರಗಿಸಿಕೊಳ್ಳುವುದು ಕಷ್ಟವೇ ಆಗಿದೆ. ಬೆಂಗಳೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ವಿಷ್ಣುವರ್ಧನ್ ಅವರ ನಿಧನ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸ್ವೀಕರ್ ಚುನಾವಣೆಯನ್ನು ಮುಂದೂಡಲು ನಿರ್ಧರಿಸಲಾಗಿದೆ. ವಿಧಾನಸಭೆಯಲ್ಲಿ ವಿಷ್ಣುವರ್ಧನ್ ಅವರ ನಿಧನದಿಂದ ಅಧಿವೇಶನವನ್ನು ಮುಂದೂಡಲಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಷ್ಣು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ವಿಷ್ಣು ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿಮ ದರುಶನ ಪಡೆಯುತ್ತಿದ್ದಾರೆ. ಸಂಜೆ 4 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


Click it and Unblock the Notifications











