ದಾಂಧಲೆಗೆ ವಿಷ್ಣು ಅಭಿಮಾನಿಗಳು ಕಾರಣರಲ್ಲ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಅಂತಿಮ ಯಾತ್ರೆಯ ವೇಳೆ ನಡೆದ ದಾಂಧಲೆಯನ್ನು ಭಾರತಿ ವಿಷ್ಣುವರ್ಧನ್ ಅವರು ಖಂಡಿಸಿದ್ದಾರೆ. ಇದು ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೇ ಹೊರತು ಇದಕ್ಕೆ ವಿಷ್ಣು ಅಭಿಮಾನಿಗಳು ಕಾರಣರಲ್ಲ ಎಂದು ಅವರು ಗುರುವಾರ ಸ್ಪಷ್ಟೀಕರಿಸಿದರು.
ವಿಷ್ಣು ಅಭಿಮಾನಿಗಳು ಈ ರೀತಿ ತಲೆ ತಗ್ಗಿಸುವ ಕೆಲಸ ಮಾಡುವವರಲ್ಲ. ಅವರು ಶಾಂತಿ ಪ್ರಿಯರು. ವಿಷ್ಣು ಅಭಿಮಾನಿಗಲು ಯಾರಿಗೂ ಯಾವ ತೊಂದರೆಯನ್ನು ಮಾಡುವವರಲ್ಲ.ಯಾರೋ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿರುವುದಾಗಿ ಅವರು ಹೇಳಿದರು.
ಅವರ ಅಂತಿಮ ಯಾತ್ರೆಯ ವೇಳೆ ಅವರ ಅಭಿಮಾನಿಗಳು ರಸ್ತೆಯನ್ನೆಲ್ಲಾ ತೊಳೆದು ತಮ್ಮ ಪ್ರೀತಿ, ವಿಶ್ವಾಸವನ್ನು ತೋರಿಸಿದ್ದರು. ಇದಕ್ಕಿಂತಲೂ ಅಭಿಮಾನ ಬೇಕೆ. ದಯವಿಟ್ಟು ಯಾರು ಯಾರಿಗೂ ತೊಂದರೆ ಕೊಡಬೇಡಿ ಎಂದು ಭಾರತಿ ವಿಷ್ಣುವರ್ಧನ್ ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ವಿಷ್ಣು ಅಂತಿಮ ಯಾತ್ರೆಗೆ ಸಹಕರಿಸಿದ ಅಪಾರ ಅಭಿಮಾನಿಗಳು, ಸರಕಾರ ಹಾಗೂ ಸಿಬ್ಬಂದಿಗೆ ಭಾರತಿ ವಿಷ್ಣುವರ್ಧನ್ ಕೃತಜ್ಞತೆಗಳನ್ನು ತಿಳಿಸಿದರು.
ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ವಿಷ್ಣು ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಭಿಮಾನಿಗಳ ಗುಂಪಿನಲ್ಲಿ ಸೇರಿಕೊಂಡ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಮೂರು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಆರು ಮಾಧ್ಯಮ ವಾಹನಗಳು ಸೇರಿದಂತೆ ಹಲವಾರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ಮನನೊಂದ ಭಾರತಿ ವಿಷ್ಣುವರ್ಧನ್ ಇದು ಕಿಡಿಗೇಡಿಗಳ ಕೃತ್ಯ ಎಂದು ಘಟನೆಯನ್ನು ಖಂಡಿಸಿದ್ದಾರೆ.
ಕಿಡಿಗೇಡಿಗಳ ವಿರುದ್ಧ ಉಗ್ರ ಕ್ರಮ
ವಿಷ್ಣುವರ್ಧನ್ ಅಂತಿಮ ಯಾತ್ರೆ ವೇಳೆ ದಾಂಧಲೆಗೆ ಕಾರಣರಾದ ಕಿಡಿಗೇದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ. ಸುಸಂಸ್ಕೃತ ನಗರ ಎಂಬ ಬೆಂಗಳೂರಿನ ಖ್ಯಾತಿಗೆ ಕಿಡಿಗೇಡಿಗಳು ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರನ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹಲವು ಬಾರಿ ಲಾಠಿ ಪ್ರಹಾರ, ಅಶ್ರುವಾಯು ಶೆಲ್ ಗಳನ್ನು ಸಿಡಿಸಲಾಯಿತು. ಅಂತ್ಯಕ್ರಿಯೆ ನಂತರ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿದರಿ ತಿಳಿಸಿದರು.


Click it and Unblock the Notifications











