ತೆಲುಗು ದೇಶಂ ಪಕ್ಷಕ್ಕೆ ಸಿನಿಮಾ ತಾರೆ ಜಯಪ್ರದಾ?
ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿದ್ದ ನಾಯಕಿ ಜಯಪ್ರದಾ. ವರನಟ ಡಾ.ರಾಜ್ ಕುಮಾರ್ ಅವರೊಂದಿಗಿನ 'ಕವಿರತ್ನ ಕಾಳಿದಾಸ' ಚಿತ್ರದ ಹಾಡು "ಓ.... ಓ....ಓ ಪ್ರಿಯತಮಾ ಪ್ರಿಯತಮಾ...ಕರುಣೆಯಾ ತೋರೆಯಾ" ನೆನಪಿಸಿಕೊಂಡರೆ ಮೈ ಪುಳಕಗೊಳ್ಳುತ್ತದೆ. ಇಷ್ಟೆಲ್ಲಾ ಹಳೆಯ ಪುರಾಣ ಹೇಳಲು ಕಾರಣ, ಜಯಪ್ರದಾ ಆಂಧ್ರ ರಾಜಕೀಯಕ್ಕೆ ಧುಮಕುತ್ತಿದ್ದಾರೆ.
ದೈವ ನಿರ್ಣಯದ ಮೇರೆಗೆ ತಾವು ಪುನಃ ಆಂಧ್ರ ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ ತಿರುಪತಿಯಲ್ಲಿ ಜಯಪ್ರದಾ ಮಂಗಳವಾರ (ಏ.3) ತಿಳಿಸಿದ್ದಾರೆ. ತನ್ನ ಹುಟ್ಟುಹಬ್ಬದ ನಿಮಿತ್ತ ಕುಟುಂಬ ಸದಸ್ಯರೊಂದಿಗೆ ಅವರು ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರು. ಬಹುಶಃ ಅವರು ತೆಲುಗು ದೇಶಂ ಪಾರ್ಟಿ ಸೇರುವ ಸಾಧ್ಯತೆಗಳಿವೆ.
ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳ ಸಮಯವಿದೆ. ಅಷ್ಟರೊಳಗೆ ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಅವರು ದರ್ಶನ್ ಅಭಿನಯದ ಭಾರಿ ಬಜೆಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











