ಶ್ರೀಮುರಳಿ ಮನೆ ಮುಂದೆ ಅಭಿಮಾನಿ ಆತ್ಮಹತ್ಯೆ ಯತ್ನ
ಬೆಂಗಳೂರಿನ ನಾಗವಾರದಲ್ಲಿರುನ ನಟ ಶ್ರೀ ಮುರಳಿ ಮನೆ ಮುಂದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಸುಂಕದಕಟ್ಟೆಯ ನಿವಾಸಿ 35 ವರ್ಷದ ಪವಿತ್ರಾ ಎಂದು ಗುರುತಿಸಲಾಗಿದೆ.
ಪವಿತ್ರಾ ಐಬಿಎಂ ಸಂಸ್ಥೆ ಉದ್ಯೋಗಿಯಾಗಿದ್ದು, ಕಂಪನಿಯಲ್ಲೇ ಮಾತ್ರೆ ಸೇವಿಸಿ ಬಂದು ಶ್ರೀಮುರಳಿ ಮನೆಮುಂದೆ ಬಂದಿದ್ದಳು ಎನ್ನಲಾಗಿದೆ. ನಿನ್ನೆ ಹಾಗೂ ಇಂದು ಬೆಳಗ್ಗೆ ಕೂಡಾ ಶ್ರೀಮುರಳಿಗೆ ಈ ಬಗ್ಗೆ ವಿಷಯ ತಿಳಿಸಿದ್ದಳು ಎನ್ನಲಾಗಿದೆ
ಈ ಕುರಿತು ಖಾಸಗಿ ಸುದ್ದಿ ವಾಹಿನಿಗಳೊಂದಿಗೆ ಪ್ರತಿಕ್ರಿಯಿಸಿರುವ ನಟ ಶ್ರೀ ಮರುಳಿ, 'ಆ ಹುಡುಗಿ ಯಾರೆಂಬುದೇ ನನಗೆ ಗೊತ್ತಿಲ್ಲ, ಹಲವು ದಿನಗಳಿಂದ ನನಗೆ ಮೆಸೇಜ್ ಮಾಡುತ್ತಿದ್ದಳು. ನೀನು ನನಗೆ ಬೇಕು, ನಿನ್ನನ್ನು ಮದುವೆಯಾಗಬೇಕು, ಎಂದೆಲ್ಲ ಹೇಳುತ್ತಿದ್ದಳು. ಆದರೆ, ಇದೆಲ್ಲ ಸರಿಯಲ್ಲ, ನನಗೆ ಮದುವೆಯಾಗಿದೆ ಎಂದು ಬುದ್ಧಿ ಹೇಳಿದ್ದೆ.

ಆದರೆ, ಇಂದು ಬೆಳಗ್ಗೆ ಕರೆ ಮಾಡಿದ್ದ ಯುವತಿ, ನಿಮ್ಮ ಮನೆ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದ್ದಕ್ಕಿದ್ದಂತೆ ಮಾತ್ರೆ ಸೇವಿಸಿ ಮನೆಯ ಬಳಿಗೆ ಬಂದಿದ್ದಳು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ' ಎಂದು ತಿಳಿಸಿದ್ದಾರೆ.
ನನಗೆ ಈ ರೀತಿ ಸಾಕಷ್ಟು ಮೆಸೇಜ್ ಗಳು ಬರುತ್ತಿರುತ್ತದೆ. ಆದರೆ, ನಾನು ಯಾರನ್ನು ಹತ್ತಿರಕ್ಕೆ ಸೇರಿಸಿಲ್ಲ. ಆದಷ್ಟು ಬುದ್ಧಿವಾದ ಹೇಳುತ್ತೇನೆ ಎಂದು ಶ್ರೀಮುರಳಿ ಹೇಳಿದ್ದಾರೆ. ಯುವತಿ ಪವಿತ್ರಾಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ.ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ನಿರ್ಮಾಪಕ ಚಿನ್ನೇಗೌಡ ಅವರ ಕಿರಿಯ ಪುತ್ರ ಶ್ರೀಮುರಳಿ ಅವರು ಸದ್ಯಕ್ಕೆ ಉಗ್ರಂ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರ 2014ರ ಫೆಬ್ರವರಿ ತಿಂಗಳಿನಲ್ಲಿ ತೆರೆ ಕಾಣುವ ಸಾಧ್ಯತೆಯಿದೆ.


Click it and Unblock the Notifications











