'ಆ ದಿನ' ಕಬ್ಬನ್ ಪಾರ್ಕ್ ನಲ್ಲಿ ನಟ ಚೇತನ್ ಗೆ ಆಗಿದ್ದೇನು?
'ಆ ದಿನಗಳು' ಖ್ಯಾತಿಯ ನಟ ಚೇತನ್ ಈಗ ಸುದ್ದಿಯಲ್ಲಿದ್ದಾರೆ. ಹಾಗಂತ, ಅವರು ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ಚೇತನ್, ಬೇಡದ ವಿಷಯಕ್ಕೆ ಪೊಲೀಸರಿಂದ ಒದೆ ತಿಂದು ಸದ್ದು ಮಾಡಿದ್ದಾರೆ.
ಹೊಸ ಹೊಸ ಸಿನಿಮಾಗಳಿಂದ ಮಾಧ್ಯಮಗಳ ಮುಂದೆ ಬರಬೇಕಿದ್ದ ಚೇತನ್, ಇಂದು ಬೆಂಗಳೂರು ಆಯುಕ್ತರ ಕಛೇರಿ ಮೆಟ್ಟಿಲೇರಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯ ಎಸ್.ಐ ನವೀನ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಚೇತನ್ ಇಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ದೂರು ನೀಡಿದ್ದಾರೆ.

ಅಸಲಿಗೆ ಆಗಿದ್ದು ಇಷ್ಟೆ, ಜನವರಿ 24 ರಂದು ಎಂ.ಜಿ.ರೋಡ್ ಬಳಿಯಿರುವ ಎಂಪೈರ್ ಹೋಟೇಲ್ ಬಳಿ ಚೇತನ್ ತಮ್ಮ ಕಾರ್ ನಲ್ಲಿ ತೆರಳುತ್ತಿದ್ದರು. ಮಧ್ಯರಾತ್ರಿ ಚೇತನ್ ಸ್ನೇಹಿತರೊಬ್ಬರಿಗೆ ಕ್ಯಾಬ್ ಮಿಸ್ ಆಗಿದ್ದರಿಂದ ಅವರನ್ನ ಪಿಕ್ ಮಾಡುವುದಕ್ಕೆ ಚೇತನ್ ಬಂದಿದ್ದರು.
ಎಂಪೈರ್ ಹೋಟೇಲ್ ಮತ್ತು ಎಂ.ಜಿ.ರೋಡ್ ಜಂಕ್ಷನ್ ಬಳಿ ತೆರಳುವಾಗ, ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಎಸ್.ಐ ನವೀನ್ ಕಣ್ಣಿಗೆ ಚೇತನ್ ಬಿದ್ದಿದ್ದಾರೆ. ಆಗ, ಚೇತನ್ ಕಾರನ್ನ ಅಡ್ಡಗಟ್ಟಿ ಎಸ್.ಐ ನವೀನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏಕವಚನ ಪ್ರಯೋಗ ಸಲ್ಲದು ಅಂತ ಚೇತನ್ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಎಸ್.ಐ ನವೀನ್, ಚೇತನ್ ಮುಖಕ್ಕೆ ನಾಲ್ಕು ಬಾರಿಸಿದ್ದಾರೆ.

ಇದರಿಂದ ಬೇಸೆತ್ತ ಚೇತನ್, ಸ್ವಲ್ಪ ಸಮಯದ ನಂತ್ರ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ ತೆರಳಿ ದೂರು ದಾಖಲಿಸುವುದಕ್ಕೆ ಮುಂದಾಗಿದ್ದಾರೆ. ಈ ಸಮಯದಲ್ಲಿ ಪೊಲೀಸರು, ಠಾಣೆಯಲ್ಲಿ ಚೇತನ್ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ಬೆಳಗಿನ ಜಾವ 6 ಗಂಟೆಯ ವರೆಗೂ ಲಾಕಪ್ ನಲ್ಲಿ ಚೇತನ್ ಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿದರೂ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು ಎಂ.ಎಲ್.ಸಿ ತಾರಾ ಅವರ ಜೊತೆ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ ಚೇತನ್. ವಿನಾಕಾರಣ ಹಲ್ಲೆಯಾಗಿರುವುದರಿಂದ ಎಸ್.ಐ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಪೊಲೀಸ್ ಕಮಿಷನರ್ ಬಳಿ ಲಿಖಿತ ದೂರನ್ನ ಚೇತನ್ ನೀಡಿದ್ದಾರೆ. [ಎತ್ತ ಕಳೆದುಹೋದರು 'ಆ ದಿನಗಳು' ಚೇತನ್?]

ಪ್ರಕರಣದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಎಂ.ಎನ್.ರೆಡ್ಡಿ ಭರವಸೆ ನೀಡಿದ್ದಾರೆ. ನ್ಯಾಯಕ್ಕಾಗಿ ದನಿಯೆತ್ತಿರುವ ಚೇತನ್ ಗೆ ನ್ಯಾಯ ಸಿಗುತ್ತಾ...ನೋಡೋಣ.


Click it and Unblock the Notifications











