ಜ್ವಾಲೆಯಂತೆ ಉರಿಯುತ್ತಿದೆ 'ಆ ಕರಾಳ ರಾತ್ರಿ' ಟ್ರೇಲರ್
'ಆ ಕರಾಳ ರಾತ್ರಿ' ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಅನೇಕ ವಿಚಾರಗಳಗೆ ಸುದ್ದಿ ಮಾಡಿದೆ. ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ನೋಡುಗರಿಗೆ ಕುತೂಹಲವನ್ನು ಹುಟ್ಟಿಸುವಲ್ಲಿ ಟ್ರೇಲರ್ ಯಶಸ್ವಿಯಾಗಿದೆ.
'ಆ ಕರಾಳ ರಾತ್ರಿ' ಚಿತ್ರ ಸಾಹಿತಿ ಮೋಹನ್ ಹಬ್ಬು ಅವರ 'ಕರಾಳ ರಾತ್ರಿ' ನಾಟಕ ಆಧಾರಿತ ಸಿನಿಮಾವಾಗಿದೆ. ಸಿನಿಮಾ ಕ್ರೈಂ ಥ್ರಿಲ್ಲರ್ ಜೊತೆಗೆ ಎಮೋಷನಲ್ ಆಗಿರಲಿದ್ದು, ಯಾವುದೇ ಹಾರರ್ ಅಂಶಗಳು ಚಿತ್ರದಲ್ಲಿ ಇಲ್ಲವಂತೆ. ವಿಶೇಷ ಅಂದರೆ, ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಜೆಕೆ ಮತ್ತು ಅನುಪಮ ಜೋಡಿಯಾಗಿದ್ದಾರೆ. ಒಂದು ಪಾತ್ರದಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸ್ ಕಾಣಿಸಿಕೊಂಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪಡೆದ 'ಅರಿವು' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಅವಿನಾಶ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಹಾಗೂ ವೀಣಾಸುಂದರ್ 'ಆ ಕರಾಳ ರಾತ್ರಿ'ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ದಯಾಳ್ ಅವರ 'ಹಗ್ಗದ ಕೊನೆ' ಸಿನಿಮಾದಲ್ಲಿ ನಟಿಸಿದ್ದ ನಟ ನವೀನ್ ಕೃಷ್ಣ ಇಲ್ಲಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಜೊತೆಗೆ ಒಂದು ಪಾತ್ರವನ್ನು ಕೂಡ ನಿರ್ವಹಿಸಲಿದ್ದಾರೆ. 1980ರ ಕಾಲಮಾನದಲ್ಲಿ ಚಿತ್ರದ ಕಥೆ ಸಾಗುತ್ತದೆ. ಅಂದಹಾಗೆ, ಈ ಸಿನಿಮಾ ಮುಂದಿನ ಶುಕ್ರವಾರ (ಜುಲೈ11) ರಂದು ಬಿಡುಗಡೆಯಾಗಲಿದೆ.


Click it and Unblock the Notifications











