'ಆರಂಭ' ಚಿತ್ರದಲ್ಲಿ ಪ್ರತೀ ಜಿಲ್ಲೆಯ ಒಬ್ಬ ಪ್ರತಿಭಾವಂತ
ಆರಂಭದಿಂದಲೂ ತಣ್ಣಗೆ ಸದ್ದು ಮಾಡುತ್ತಿರುವ ಚಿತ್ರ 'ಆರಂಭ'. ಈ ಚಿತ್ರದ ಕಥಾವಸ್ತು ಕೂಡ ಕೊಂಚ ಭಿನ್ನವಾಗಿದ್ದು ಕಾವೇರಿ ಜಲವಿವಾದ ಪ್ರಸ್ತುತತೆ ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರದ ಟೈಟಲ್ ಡಿಸೈನ್ ನಿಂದ ಹಿಡಿದು ಪ್ರತಿಯೊಂದು ಹಂತದಿಂದಲೂ ಸಾಕಷ್ಟು ಶ್ರದ್ಧೆ ವಹಿಸುತ್ತಾ ಬಂದಿದೆ ಚಿತ್ರತಂಡ.
ಮೀಸೆ ಪ್ರಕಾಶ್ @ ಮಧುಗಿರಿ ಪ್ರಕಾಶ್ ಗಾಂಧಿನಗರದಲ್ಲಿ ಬಹು ಪರಿಚಿತ ಹೆಸರು, 25 ವರ್ಷಗಳ ಹಿಂದೆ ಇಂಡಸ್ಟ್ರಿನಲ್ಲಿ ಹೀರೋ ಆಗಬೇಕು ಅಂತ ಬಂದು, ಅನಿವಾರ್ಯ ಕಾರಣಗಳಿಂದ ಪ್ರೊಡಕ್ಷನ್ ಮೇನೇಜರ್ ಆಗಿ, ಬರೀ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದವರು. ತಮ್ಮ ಹಣೆಬರಹದಲ್ಲಿ ಇರದಿದ್ದನ್ನು ಈಗ ತಮ್ಮ ಮಗ ಮಿಥುನ್ ಪ್ರಕಾಶ್ ಹಣೆಯಲ್ಲಿ ಕಾಣಲು ಹೊರಟಿದ್ದಾರೆ ಮೀಸೆ ಪ್ರಕಾಶ್. [ಲಾಸ್ಟ್ ಛಾನ್ಸ್: ಆರಂಭ ಟೈಟಲ್ ಡಿಜೈನ್ ಸ್ಪರ್ಧೆ]

ಕಾವ್ಯಾ ಶಾ ಚಿತ್ರದ ನಾಯಕಿ. ಆದರೆ ಚಿತ್ರದ ನಿರ್ದೇಶಕ ಅಭಿ ಹನಕೆರೆ ಅವರ ಪ್ರಕಾರ ಯಾವುದೇ ಚಿತ್ರವಾಗಲಿ ನಿರ್ದೇಶನವೇ ಹೀರೋ ಇದ್ದಂತೆ, ಅದೇ ರೀತಿ ಸಂಗೀತ ಹೀರೋಯಿನ್ ಇದ್ದಂತೆ ಎನ್ನುತ್ತಾರೆ. ಅವರ ಪ್ರಕಾರ ಅವೆರಡೂ ಬಹಳ ಪ್ರಾಮುಖ್ಯತೆಯುಳ್ಳ ಅಂಶಗಳು ಎಂಬುದು.
ಈಗಾಗಲೆ ಚಿತ್ರವನ್ನು ಬೆಂಗಳೂರು, ಕೊಳ್ಳೆಗಾಲ, ಅರಕಲಗೂಡಿನಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಕೊನೆಯ ಹಂತದ ಚಿತ್ರೀಕರಣ ಹೊಳೆನರಸೀಪುರದಲ್ಲಿ ಬಿರುಸಿನಿಂದ ಸಾಗುತ್ತಿದೆ. ಕರ್ನಾಟಕದ ಪ್ರತೀ ಜಿಲ್ಲೆಯ ಒಬ್ಬಬ್ಬ ಪ್ರತಿಭಾನ್ವಿತರಿಗೆ ಈ ತಂಡದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದು ಚಿತ್ರದ ಇನ್ನೊಂದು ವಿಶೇಷ.
ಶರಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಡಿ.ಗಣೇಶ್, ವಿ ನಾಗೇನಹಳ್ಳಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ಗೋಟೂರಿ ಸಾಹಿತ್ಯ ಚಿತ್ರಕ್ಕಿದ್ದು ಇಂಜಿನಿಯರಿಂಗ್ ಪದವೀಧರರೂ ಆಗಿರುವ ಅಭಿ ಹನಕೆರೆ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. (ಒನ್ಇಂಡಿಯಾ ಕನ್ನಡ)


Click it and Unblock the Notifications











